'ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿ, ಇಲ್ಲಾಂದ್ರೆ ಜಿಹಾದ್ ಮಾಡ್ತೇವೆ'
ಲಾಹೋರ್, ಶನಿವಾರ, 6 ಫೆಬ್ರವರಿ 2010( 12:17 IST )
ಜಮ್ಮು-ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವುದರಿಂದ ಮಾತ್ರ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಮಸ್ಯೆಗಳ ಪರಿಹಾರ ಸಾಧ್ಯ ಎಂದಿರುವ ಮುಂಬೈ ಹತ್ಯಾಕಾಂಡದ ರೂವಾರಿ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸೈಯದ್, ಇದು ಸಾಧ್ಯವಾಗದಿದ್ದಲ್ಲಿ ತೀವ್ರವಾದಿ ಗುಂಪುಗಳು 'ಜಿಹಾದ್' ನಡೆಸಲಿವೆ ಎಂದಿದ್ದಾನೆ.
ಇಲ್ಲಿನ ಮಾಲ್ ರೋಡ್ನಲ್ಲಿ 'ಕಾಶ್ಮೀರ ಐಕ್ಯತಾ ದಿನ' ಕಾರ್ಯಕ್ರಮಕ್ಕಾಗಿ ನೆರೆದಿದ್ದ 10,000ಕ್ಕೂ ಹೆಚ್ಚು ಮಂದಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೈಯದ್, ಭಾರತದ ಗೃಹಸಚಿವ ಪಿ. ಚಿದಂಬರಂ ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ಲಾಹೋರ್ಗೆ ಭೇಟಿ ನೀಡಿದಲ್ಲಿ ಈ ಸಂದೇಶವನ್ನು ನಾನು ಅವರಿಗೆ ರವಾನಿಸಲಿದ್ದೇನೆ ಎಂದು ತಿಳಿಸಿದ್ದಾನೆ.
ನಾವು ಉಭಯ ದೇಶಗಳ ಶಾಂತಿ ಮಾತುಕತೆಯ ವಿರೋಧಿಗಳಲ್ಲ. ಚಿದಂಬರಂ ಇಸ್ಲಾಮಾಬಾದ್ಗೆ ಹೋಗುವ ಮೊದಲು ಲಾಹೋರ್ಗೆ ಬಂದು ನನ್ನ ಜತೆ ಮೊದಲು ಮಾತುಕತೆ ನಡೆಸಲಿ ಎಂದು ನಾನು ಹೇಳುತ್ತಿದ್ದೇನೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಮಸ್ಯೆಗಳ ಪರಿಹಾರಕ್ಕೆ ನಾನು ಸೂಕ್ತ ಪರಿಹಾರವನ್ನು ಸೂಚಿಸುತ್ತೇನೆ ಎಂದು ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿನ ರೂವಾರಿಯೆಂದು ಭಾರತ ಆರೋಪಿಸಿರುವ ಸೈಯದ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾನೆ.
ಭಾರತದ ವಶದಲ್ಲಿರುವ ಕಾಶ್ಮೀರಕ್ಕೆ ವಿಮೋಚನೆ ಒದಗಿಸುವುದೊಂದೇ ಈಗಿರುವ ಸಮಸ್ಯೆಗಿರುವ ಏಕೈಕ ಪರಿಹಾರ. ಅದು ಸಾಧ್ಯವಾಗದೇ ಇದ್ದರೆ ನಮಗಿರುವ ಮತ್ತೊಂದು ಆಯ್ಕೆಯೆಂದರೆ ಜಿಹಾದ್ ಎಂದು ಸ್ಪಷ್ಟಪಡಿಸಿದ್ದಾನೆ.
ಅಲ್ಲದೆ ಈ ಹಿಂದಿನ ಹೈದರಾಬಾದ್ ರಾಜ್ಯಕ್ಕೆ ವಿಮೋಚನೆ ಒದಗಿಸುವುದು ಕೂಡ ಜಮಾತ್ ಉದ್ ದಾವಾ ಅಜೆಂಡಾ ಎಂದೂ ಆತ ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ.
ಲಷ್ಕರ್ ಇ ತೋಯ್ಬಾ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕನಾಗಿರುವ ಸೈಯದ್, ಭಾರತದೊಂದಿಗಿನ ಮಾತುಕತೆ ನೆಪದಲ್ಲಿ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಪಾಕಿಸ್ತಾನ ಸರಕಾರಕ್ಕೆ ಸಾಧ್ಯವಾಗದು ಎಂದು ಎಚ್ಚರಿಕೆ ನೀಡಿದ್ದಾನೆ.
ಭಾರತವು ಮಾತುಕತೆಗೆ ಉತ್ಸುಕತೆ ತೋರಿಸುವಾಗಲೆಲ್ಲಾ ನಮ್ಮ ಆಡಳಿತಗಾರರು ಆನಂದ ತುಂದಿಲರಾಗುತ್ತಾರೆ. ಭಾರತವು ಯಾವತ್ತೂ ಶ್ರೀನಗರ ಮತ್ತು ಜಮ್ಮುವಿನ ಸ್ವಾತಂತ್ರ್ಯದ ಬಗ್ಗೆ ಮಾತುಕತೆ ನಡೆಸುವುದಿಲ್ಲ ಎಂಬುದನ್ನು ನಾನು ಹೇಳಲು ಬಯಸುತ್ತಿದ್ದೇನೆ. ಇದನ್ನು ಪಾಕಿಸ್ತಾನವು ಅರ್ಥ ಮಾಡಿಕೊಳ್ಳಬೇಕು ಎಂದು ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದಾನೆ.