ಬಾಂಗ್ಲಾ ಹಿಂದೂ ದೇವಸ್ಥಾನಕ್ಕೆ ದುಷ್ಕರ್ಮಿಗಳ ದಾಳಿ, ವಿಗ್ರಹ ಧ್ವಂಸ
ಭಾನುವಾರ, 7 ಫೆಬ್ರವರಿ 2010( 11:34 IST )
ದುಷ್ಕರ್ಮಿಗಳ ತಂಡವೊಂದು ಬಾಂಗ್ಲಾದೇಶದ ಪ್ರಸಿದ್ಧ ಹಿಂದೂ ದೇಗುಲವೊಂದಕ್ಕೆ ದಾಳಿ ನಡೆಸಿದ್ದು, ಅಲ್ಲಿನ ಹಲವು ವಿಗ್ರಹಗಳನ್ನು ಧ್ವಂಸ ಮಾಡಿದೆ. ಈ ಸಂದರ್ಭದಲ್ಲಿ ಹಿಂದೂ ಸಮುದಾಯದವರ ನಾಲ್ಕು ಮನೆಗಳಿಗೂ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
30ರಿಂದ 35ರಷ್ಟಿದ್ದ ಜನರ ಗುಂಪೊಂದು ನಾರಾಯಣಗಂಜ್ ಜಿಲ್ಲೆಯ ಪುರಾತನ ದೇಗುಲ ಸೋನಾರ್ಗಾಂವ್ ಮೇಲೆ ದಾಳಿ ನಡೆಸಿ ದೇವರ ಆರು ಮೂರ್ತಿಗಳನ್ನು ಧ್ವಂಸ ಮಾಡಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಇಶ್ರಾಫ್ದಿ ಗ್ರಾಮದಲ್ಲಿನ ಶ್ರೀ ಶ್ರೀ ರಕ್ಷಕಾಳಿ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ದುಷ್ಕರ್ಮಿಗಳು ದೇವಸ್ಥಾನಕ್ಕೆ ದಾಳಿ ನಡೆಸಿದ ಬಳಿಕ ಪಕ್ಕದಲ್ಲಿನ ನಾಲ್ಕು ಮನೆಗಳ ಮೇಲೂ ಮುಗಿ ಬಿದ್ದಿದ್ದಾರೆ. ಘಟನೆಯಿಂದ ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ರಕ್ಷಕಾಳಿ ದೇಗುಲದಲ್ಲಿ ಫೆಬ್ರವರಿ 2ರಂದು ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಈ ಸಂದರ್ಭದಲ್ಲಿ ಓರ್ವ ಭಕ್ತ ಮತ್ತು ಗ್ರಾಮದ ಮೂವರು ಯುವಕರ ನಡುವಿನ ವಾಗ್ವಾದವೇ ದೇವಸ್ಥಾನ ಮೇಲಿನ ದಾಳಿಗೆ ಕಾರಣ ಎಂದು ಹೇಳಲಾಗಿದೆ.
ಆದರೆ ಇಲ್ಲಿನ ಹಿಂದೂ ಸಂಘಟನೆಗಳು ಇದರ ಹಿಂದೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮೂಲಭೂತವಾದಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಇಸ್ಲಾಮಿಕ್ ಭಯೋತ್ಪಾದಕರನ್ನು ಬೆಂಬಲಿಸುವ ಪಾಕಿಸ್ತಾನದ ಐಎಸ್ಐ ಮತ್ತು ಸೌದಿ ಅರೇಬಿಯಾದಿಂದ ಹರಿದು ಬರುವ ಹಣವನ್ನು ಹಿಂದೂಗಳ ಮೇಲಿನ ದಾಳಿಗಳಿಗೆ ಬಳಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ದೂರಿಕೊಂಡಿವೆ.