ಇಸ್ಲಾಮಾಬಾದ್, ಭಾನುವಾರ, 7 ಫೆಬ್ರವರಿ 2010( 16:33 IST )
ಬುಡಕಟ್ಟು ಪ್ರಾಂತ್ಯದಲ್ಲಿ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಪರಿಣಾಮ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿಗಳಿಗೆ ಹೆದರಿದ ಪಾಕಿಸ್ತಾನ ತನ್ನ ಭದ್ರತಾ ಪಡೆಗಳ ವಾರ್ಷಿಕ ಕವಾಯತನ್ನು ಸತತ ಮೂರನೇ ವರ್ಷ ರದ್ದುಪಡಿಸಿದೆ.
'ಪಾಕಿಸ್ತಾನ್ ಡೇ' ಪ್ರಯುಕ್ತ ಈ ವರ್ಷದ ಮಾರ್ಚ್ 23ರಂದು ನಡೆಯಬೇಕಿದ್ದ ದೇಶದ ಶಸ್ತ್ರಾಸ್ತ್ರ ಪಡೆಗಳ ಬೃಹತ್ ಕವಾಯತನ್ನು ಸಿಬ್ಬಂದಿಗಳ ಸಮಿತಿಯ ಜಂಟಿ ಮುಖ್ಯಸ್ಥರ ಅಧ್ಯಕ್ಷರಾದ ಜನರಲ್ ತಾರಿಖ್ ಮಜೀದ್ ನೀಡಿದ ವರದಿಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿಯವರು ರದ್ದುಪಡಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಕವಾಯತು ನಡೆಯುವ ವೇಳೆ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಬಹುದು ಎಂಬ ಬೆದರಿಕೆಗಳಿದ್ದವು. ಅಲ್ಲದೆ ಈ ಸಮಾರಂಭದಲ್ಲಿ ಅಗ್ರಮಾನ್ಯರಾದ ಅಧ್ಯಕ್ಷರು, ಪ್ರಧಾನಿ, ರಾಜತಾಂತ್ರಿಕರು ಮತ್ತು ಭಾರೀ ಸಂಖ್ಯೆಯಲ್ಲಿ ಜನತೆ ಹಾಜರಿರುವುದರಿಂದ ಸುರಕ್ಷತೆ ಪ್ರಮುಖ ವಿಚಾರವಾಗಿರುತ್ತದೆ ಎಂದು ಸಚಿವಾಲಯ ವಿವರಣೆ ನೀಡಿದೆ.
ಕರಾಚಿಯಲ್ಲಿ ಎರಡು ಸರಣಿ ಬಾಂಬ್ ದಾಳಿಗಳು ನಡೆದ ಒಂದೇ ದಿನದ ಅಂತರದಲ್ಲಿ ಸರಕಾರ ಇದನ್ನು ಪ್ರಕಟಿಸಿದೆ. ಈ ಬಾಂಬ್ ದಾಳಿಯಲ್ಲಿ 33 ಮಂದಿ ಸಾವನ್ನಪ್ಪಿದ್ದರು.
ದೇಶದಲ್ಲಿನ ಪ್ರಸಕ್ತ ಭದ್ರತಾ ಪರಿಸ್ಥಿತಿ ಮತ್ತು ದಕ್ಷಿಣ ವಜಿರಿಸ್ತಾನದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಂಟಿ ಕವಾಯತನ್ನು ನಡೆಸುವುದು ಅಸಾಧ್ಯ ಎಂದು ಮೂಲಗಳು ಹೇಳಿವೆ ಎಂದು 'ಆನ್ಲೈನ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನ-ಅಫಘಾನಿಸ್ತಾನ ಗಡಿಭಾಗದಲ್ಲಿ 1,50,000 ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದ್ದರೆ, ಬುಡಕಟ್ಟು ಪ್ರದೇಶ ಸ್ವಾತ್ ಮತ್ತು ಮಾಲಾಕಂಡ್ ಪ್ರಾಂತ್ಯದಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳಲು ಸಾವಿರಕ್ಕೂ ಹೆಚ್ಚು ಮಿಲಿಟರಿ ಪಡೆಗಳನ್ನು ಹರಡಲಾಗಿದೆ.
ಪಾಕಿಸ್ತಾನದಲ್ಲಿ ಕೊನೆಯ ಬೃಹತ್ ಕವಾಯತು ನಡೆದಿರುವುದು 2007ರಲ್ಲಿ. ಆಗಿನ ಅಧ್ಯಕ್ಷರಾಗಿದ್ದ ಜನರಲ್ ಫರ್ವೇಜ್ ಮುಶರಫ್ ಇದರಲ್ಲಿ ಪಾಲ್ಗೊಂಡಿದ್ದರು.