ಯುದ್ಧ ಮಾಡ್ತೇವೆ ಅಂತಿದ್ದವರೇ ಮಾತುಕತೆಗೆ ಬರ್ತಿದ್ದಾರೆ: ಪಾಕಿಸ್ತಾನ
ಇಸ್ಲಾಮಾಬಾದ್, ಮಂಗಳವಾರ, 9 ಫೆಬ್ರವರಿ 2010( 10:31 IST )
ಭಾರತದ ಮುಂದೆ ನಾವು ಮಂಡಿಯೂರಿಲ್ಲ ಎಂದು ಶಾಂತಿ ಮಾತುಕತೆ ಪ್ರಸ್ತಾಪವನ್ನು ಲೇವಡಿ ಮಾಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮಹಮೂದ್ ಖುರೇಷಿ, ಮುಂಬೈ ದಾಳಿಯ ನಂತರ ಯುದ್ಧ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದವರೇ ಈಗ ಶಾಂತಿ ಮಾತುಕತೆಯ ಆಹ್ವಾನ ನೀಡುತ್ತಿದ್ದಾರೆ ಎಂದು ಭಾರತದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಮುಲ್ತಾನ್ನಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, 2008ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಭಾರತವು ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಸಿದ್ಧತೆ ನಡೆಸುತ್ತಿತ್ತು; ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ಒಂದು ವರ್ಷದ ನಂತರ ಈಗ ಅವರೇ ತಮ್ಮ ನಿಯೋಗವನ್ನು ಪಾಕಿಸ್ತಾನಕ್ಕೆ ಮಾತುಕತೆಗೆ ಕಳುಹಿಸುತ್ತಿದ್ದಾರೆ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಪಾಕಿಸ್ತಾನದ ಪ್ರಗತಿಗಾಗಿ ಸಮಾನ ಸ್ಪೂರ್ತಿಯೊಂದಿಗೆ ಮುನ್ನಡೆಯುವ ನಿರ್ಧಾರ ಮತ್ತು ರಾಷ್ಟ್ರೀಯ ಐಕ್ಯತೆಯಿಂದಾಗಿ ಇವೆಲ್ಲವೂ ಸಾಧ್ಯವಾಗಿದೆ. ಪಾಕಿಸ್ತಾನ ಸರಕಾರವು ದೇಶದ ಹಿತಾಸಕ್ತಿ ಜತೆ ಯಾವತ್ತೂ, ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖುರೇಷಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಭಾರತವು ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಶಾಂತಿ ಮಾತುಕತೆಯನ್ನು ಫೆಬ್ರವರಿ 18 ಅಥವಾ 25ರಂದು ನಡೆಸುವ ಒಲವನ್ನು ವ್ಯಕ್ತಪಡಿಸಿದ್ದು, ಪಾಕಿಸ್ತಾನ ಇನ್ನಷ್ಟೇ ಅಧಿಕೃತವಾಗಿ ಪ್ರತಿಕ್ರಿಯೆ ನೀಡಬೇಕಿದೆ.
ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಖುರೇಷಿ, ಪಾಕಿಸ್ತಾನವು ಭಾರತದ ಮುಂದೆ ಮಂಡಿಯೂರಿಲ್ಲ, ಭಾರತವೇ ಮಾತುಕತೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಅಂತಹ ಅನಿವಾರ್ಯತೆಯನ್ನು ಭಾರತ ಎದುರಿಸಿದೆ ಎಂದು ಕುಟುಕಿದ್ದರು.
ಮುಂಬೈ ದಾಳಿಯನ್ನೇ ಮುಂದಿಟ್ಟುಕೊಂಡು ದ್ವಿಪಕ್ಷೀಯ ಸಂಬಂಧಗಳನ್ನು ಕಡಿದುಕೊಂಡಿದ್ದ ಭಾರತವು, ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಏಕಾಂಗಿಯನ್ನಾಗಲು ಪ್ರಯತ್ನಸಿತು. ಅದಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಗಳನ್ನು ಭರಪೂರವಾಗಿ ಬಳಸಿಕೊಂಡಿತ್ತು. ಆದರೆ ತನ್ನ ತಂತ್ರದಲ್ಲಿ ವೈಫಲ್ಯತೆ ಎದುರಿಸಿದ ನಂತರ ಮತ್ತೆ ಮಾತುಕತೆಗೆ ನಮ್ಮ ಬಳಿ ಬಂದಿದೆ ಎಂದು ಖುರೇಷಿ ಹೇಳಿದ್ದರು.