ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಕಟವರ್ತಿ ನೇಪಾಳ ಮೂಲದ ಜಮೀಮ್ ಷಾ(47)ನನ್ನು ಛೋಟಾ ರಾಜನ್ ಸಹಚರರು ಹತ್ಯೆಗೈದಿರುವುದಾಗಿ ಸ್ವತಃ ರಾಜನ್ ಬಂಟರು ಹೊಣೆ ಹೊತ್ತುಕೊಂಡಿದ್ದಾರೆ.
ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾನೆ ಎಂಬ ಆರೋಪದ ಮೇಲೆ ಷಾನನ್ನು ಭಾನುವಾರ ಅರಮನೆ ರಸ್ತೆ ಸಮೀಪ ಛೋಟಾ ರಾಜನ್ ಸಹಚರರಾದ ಭರತ್ ನೇಪಾಳಿ ಹಾಗೂ ಮಂಗಳೂರು ಮೂಲದ ವಿಕ್ಕಿ ಶೆಟ್ಟಿ ಹತ್ಯೆಗೈದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಜಮೀಮ್ ಷಾ, ಕಂದಾಹಾರ್ ವಿಮಾನ ಅಪಹರಣ ಪ್ರಕರಣದಲ್ಲೂ ಭಾಗಿಯಾಗಿದ್ದ. ಆ ನಿಟ್ಟಿನಲ್ಲಿ ದೇಶದ್ರೋಹಿ ಷಾನನ್ನು ನಾವೇ ಹತ್ಯೆಗೈದಿರುವುದಾಗಿ ಛೋಟಾ ರಾಜನ್ ಸಹಚರರು ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಜಮೀಮ್ ಷಾ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಪಾಕಿಸ್ತಾನ್ ಇಂಟರ್ ಸರ್ವಿಸ್ ಇಂಟಲಿಜೆನ್ಸ್(ಐಎಸ್ಐ) ಜೊತೆಗೆ ನಿಕಟ ಸಂಪರ್ಕ ಹೊಂದಿದ್ದು, ಆತ ಭಾರತದಲ್ಲಿ ನಕಲಿ ನೋಟುಗಳ ಚಲಾವಣೆಯ ಪ್ರಮುಖ ರೂವಾರಿಯಾಗಿದ್ದ ಎಂದು ನೇಪಾಳ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಷಾ ಹತ್ಯೆ ಕುರಿತಂತೆ ಸೂಕ್ತ ಸಾಕ್ಷ್ಯ ದೊರೆತ ಬಳಿಕ ವಿವರ ನೀಡಲಾಗುವುದು ಎಂದು ತಿಳಿಸಿದ್ದಾರೆ.