ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದಿರುವ ಕೆಲವು ಹಿಂಸಾಚಾರ, ದಾಳಿ ಜನಾಂಗೀಯ ಪ್ರೇರಿತವಾಗಿರುವುದಾಗಿ ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಮಂಗಳವಾರ ಸಂಸತ್ನಲ್ಲಿ ಒಪ್ಪಿಕೊಂಡಿದ್ದು, ಇದರಿಂದಾಗಿ ನಿಜಕ್ಕೂ ದೇಶದ ಕೀರ್ತಿ ಮತ್ತು ಗೌರವಕ್ಕೆ ಬಂದಿರುವುದಾಗಿಯೂ ಹೇಳಿದರು.
ಆ ನಿಟ್ಟಿನಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಪ್ರಜೆಗಳ ಹತ್ಯೆ ಮತ್ತು ಹಲ್ಲೆಗೊಳಗಾದ ಕುಟುಂಬಕ್ಕೆ ಸರ್ಕಾರ ಸಾಂತ್ವಾನ ಹೇಳಬೇಕೆಂದು ಸಚಿವ ಸ್ಟೇಪನ್ ಸ್ಮಿತ್ ಸಂಸತ್ನಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ, ದೇಶದ ಖ್ಯಾತಿಗೆ ಧಕ್ಕೆ ತರುವಂತಹ ಇಂತಹ ಘಟನೆಯನ್ನು ತಡೆಗಟ್ಟುವಲ್ಲಿ ಕಾನೂನು ಸಚಿವರು ಪ್ರಮುಖ ಆದ್ಯತೆಯನ್ನು ನೀಡಬೇಕು ಎಂದರು.
ಕಳೆದ ವರ್ಷದಿಂದ ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಜನಾಂಗೀಯ ಹಲ್ಲೆ ಮತ್ತು ಹತ್ಯೆ ನಡೆಯುತ್ತಿದ್ದು, ಇದು ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಆಸೀಸ್ನಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಭಾರತ ಸಾಕಷ್ಟು ಬಾರಿ ಮನವಿ ಮಾಡಿತ್ತು.
ಏತನ್ಮಧ್ಯೆ, ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆದಿಲ್ಲ ಎಂಬುದಾಗಿಯೇ ಸಮಜಾಯಿಷಿ ನೀಡುತ್ತಲೇ ಬಂದಿತ್ತು. ಇದೀಗ ಕೊನೆಗೂ ಭಾರತೀಯರ ಮೇಲೆ ನಡೆದ ಕೆಲವು ದಾಳಿ ಜನಾಂಗೀಯ ದ್ವೇಷದಿಂದ ಕೂಡಿರುವುದಾಗಿದೆ ಎಂದು ಆಸ್ಟ್ರೇಲಿಯಾ ಒಪ್ಪಿಕೊಂಡಿದೆ.
ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದ ಸಂಬಂಧದ ನಿಟ್ಟಿನಲ್ಲಿಯೂ ಕೂಡ ದಾಳಿಯನ್ನು ತಡೆಯುವಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಮಿತ್ ವಿವರಿಸಿದರು. ದೇಶದಲ್ಲಿ ಜನಾಂಗೀಯವಾಗಿ ನಡೆದ ದಾಳಿ ಕುರಿತಂತೆ ಸೂಕ್ತ ತನಿಖೆ ನಡೆಸಿ ಅಂತಹವರಿಗೆ ಶಿಕ್ಷೆ ವಿಧಿಸುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.