ಇಸ್ಲಾಮಾಬಾದ್, ಮಂಗಳವಾರ, 9 ಫೆಬ್ರವರಿ 2010( 17:35 IST )
ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯು ಸಂಪೂರ್ಣ ಮಾತುಕತೆಗೆ ತೆರೆದುಕೊಳ್ಳಬಹುದು ಎಂಬ ನಿರೀಕ್ಷೆಗಳ ನಡುವೆ ಭಾರತ ನೀಡಿರುವ ಮಾತುಕತೆ ಆಹ್ವಾನದ ಕುರಿತು ಚರ್ಚೆ ನಡೆಸಲು ಪಾಕಿಸ್ತಾನವು ಉನ್ನತ ಮಟ್ಟದ ಸಭೆ ಕರೆದಿದೆ.
ಭಾರತ ಮುಂದಿಟ್ಟಿರುವ ಮಾತುಕತೆಯಲ್ಲಿ ಭಯೋತ್ಪಾದನೆ ನಿರ್ಬಂಧಿಸುವುದು ಮತ್ತು ಈ ಕುರಿತು ವ್ಯವಸ್ಥಿತ ಪ್ರತಿಕ್ರಿಯೆ ನೀಡುವುದರ ಕುರಿತು ಪಾಕಿಸ್ತಾನವು ಸಂದಿಗ್ಧತೆಗೆ ಸಿಲುಕಿದ್ದು, ಯಾವ ವಿಚಾರಗಳ ಕುರಿತು ಪ್ರಸ್ತಾಪ ನಡೆಸಬೇಕು ಮತ್ತು ಯಾವ ಉತ್ತರಗಳನ್ನು ನೆರೆಯ ದೇಶಕ್ಕೆ ನೀಡಬೇಕು ಎಂಬ ನಿರ್ಣಯಗಳ ಕುರಿತು ಸಚಿವರುಗಳು ಚರ್ಚೆ ನಡೆಸಲಿದ್ದಾರೆ.
ಈ ಸಂಬಂಧ ನಾಳೆ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಸಚಿವರುಗಳ ಸಭೆಯ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ವಹಿಸಿಕೊಳ್ಳಲಿದ್ದಾರೆ. ಇಲ್ಲಿ ಭಾರತದ ಮಾತುಕತೆಯ ಆಹ್ವಾನಕ್ಕೆ ಸ್ಪಷ್ಟ ಪ್ರತಿಕ್ರಿಯೆ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಈ ಸಭೆಯಲ್ಲಿ ಆಂತರಿಕ ಮತ್ತು ರಕ್ಷಣಾ ಸಚಿವಾಲಯದ ಪ್ರತಿನಿಧಿಗಳು ಹಾಗೂ ಐಎಸ್ಐ ಸೇರಿದಂತೆ ಬೇಹುಗಾರಿಕಾ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಭಾರತವು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರ ಮೂಲಕ ಕಳೆದ ತಿಂಗಳು ಮಾತುಕತೆ ಸಿದ್ಧವಿದೆ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಕಳುಹಿಸಿತ್ತು. ಈ ಸಂಬಂಧ ಪಾಕಿಸ್ತಾನ ವಿದೇಶಾಂಗ ಸಚಿವಾಲಯವು ನಿನ್ನೆಯಷ್ಟೇ ಆಂತರಿಕ ಮಾತುಕತೆ ನಡೆಸಿದೆ.
ಭಾರತವು ಫೆಬ್ರವರಿ 18 ಅಥವಾ 25ರಂದು ಮಾತುಕತೆ ನಡೆಸುವ ಸಂಭಾವ್ಯ ದಿನಾಂಕಗಳನ್ನು ಪಾಕಿಸ್ತಾನಕ್ಕೆ ನೀಡಿದೆ. ಈ ಎರಡು ದಿನಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಅಥವಾ ಮಾತುಕತೆ ಪ್ರಸ್ತಾಪವನ್ನು ನಿರಾಕರಿಸುವ ನಿರ್ಧಾರ ಪಾಕಿಸ್ತಾನದ ವಿವೇಚನೆಗೆ ಬಿಟ್ಟದ್ದು ಎಂದು ಮೂಲಗಳು ಹೇಳಿವೆ.
2008ರ ಮುಂಬೈ ಭಯೋತ್ಪಾದನಾ ದಾಳಿಯ ಬಳಿಕ ಸ್ಥಗಿತಗೊಂಡಿರುವ ಉಭಯ ದೇಶಗಳ ನಡುವಿನ ಯಾವುದೇ ಮಾತುಕತೆಗಳು ಸಂಭಾವ್ಯ ದ್ವಿಪಕ್ಷೀಯ ಮಾತುಕತೆಗಳಿಗೆ ಕಾರಣವಾಗಬಹುದು ಎಂದು ನಿನ್ನೆ ನಡೆದ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ತಿಳಿಸಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.