ಇಸ್ಲಾಮಾಬಾದ್, ಮಂಗಳವಾರ, 9 ಫೆಬ್ರವರಿ 2010( 19:36 IST )
ಪಾಕಿಸ್ತಾನ ಭದ್ರತಾ ಪಡೆ ಭಾರತದ 'ರಾ' (ರಿಸರ್ಚ್ ಮತ್ತು ಅನಾಲಿಸೀಸ್ ವಿಂಗ್)ಸಂಸ್ಥೆಯ ಮೂರು ಮಂದಿಯನ್ನು ಸೆರೆ ಹಿಡಿದಿರುವುದಾಗಿ ಮಾಧ್ಯಮದ ವರದಿಯೊಂದು ಮಂಗಳವಾರ ತಿಳಿಸಿದೆ.
ಬುಡಕಟ್ಟು ಪ್ರದೇಶದ ವಾಯುವ್ಯ ಪ್ರದೇಶದಲ್ಲಿ ಮೂರು ಮಂದಿಯನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಅವರು ಅಫ್ಘಾನ್ ಪ್ರಜೆಗಳು ಎಂದು ತಿಳಿಸಿದ್ದರು. ಆದರೆ ತೀವ್ರ ವಿಚಾರಣೆಯ ಬಳಿಕ, ತಾವು ಭಾರತದ ರಾ ಏಜೆಂಟರಾಗಿದ್ದು, ಸಿಂಧ್ ಪ್ರಾಂತ್ಯ ಸೇರಿದಂತೆ ದೇಶದ ವಿವಿಧೆಡೆ ಘರ್ಷಣೆ ಹುಟ್ಟು ಹಾಕಲು ಬಂದಿರುವುದಾಗಿ ತಿಳಿಸಿದ್ದಾರೆಂದು ಆನ್ಲೈನ್ ನ್ಯೂಸ್ ಏಜೆನ್ಸಿ ವರದಿ ವಿವರಿಸಿದೆ.
ಇತ್ತೀಚೆಗೆ ಕರಾಚಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿಯೂ ರಾ ಶಾಮೀಲಾಗಿರುವ ಬಗ್ಗೆ ದಾಖಲೆ ಲಭಿಸಿರುವುದಾಗಿ ಭದ್ರತಾ ಪಡೆಯ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಫೆ.5ರಂದು ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ 27ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಲ್ಲದೇ, ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮೊಹರಂ ಮೆರವಣಿಗೆ ಸಂದರ್ಭ ಆತ್ಮಹತ್ಯಾ ಬಾಂಬರ್ನೊಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡ ಪರಿಣಾಮ 40ಮಂದಿ ಬಲಿಯಾಗಿದ್ದರು.