ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ವಿಜಯ ದಾಖಲಿಸಿದ ಕೆಲವೇ ದಿನಗಳಲ್ಲಿ ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆ ರಾಷ್ಟ್ರೀಯ ಸಂಸತ್ತನ್ನು ವಿಸರ್ಜಿಸಿದ್ದಾರೆ. ಮಹಾ ಚುನಾವಣೆಗೆ ಇನ್ನೂ ಎರಡು ತಿಂಗಳಿರುವಾಗಲೇ ರಾಜಪಕ್ಷೆ ಇದನ್ನು ಮಂಗಳವಾರ ಪ್ರಕಟಿಸಿದ್ದಾರೆ.
ಮಿಲಿಟರಿ ಮಾಜಿ ಮುಖ್ಯಸ್ಥ ಜನರಲ್ ಸರತ್ ಫೊನ್ಸೇಕಾ ಅವರನ್ನು ಜನವರಿ 26ರಂದು ನಡೆದ ಚುನಾವಣೆಯಲ್ಲಿ ಸೋಲಿಸಿದ ರಾಜಪಕ್ಷೆಯವರು ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸಂಸತ್ತನ್ನು ವಿಸರ್ಜಿಸಿದ್ದು, ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸಂಬಂಧ ಸರಕಾರಿ ಪ್ರಕಟಣೆ ಇನ್ನಷ್ಟೇ ಹೊರಡಬೇಕಿದೆ, ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಷ್ಯಾ ಪ್ರವಾಸದಿಂದ ಹಿಂತಿರುಗುತ್ತಿದ್ದಂತೆಯೇ ಅಧಿಕೃತ ಆದೇಶಕ್ಕೆ ರಾಜಪಕ್ಷೆ ಸಹಿ ಮಾಡಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಪಟ್ಟಾಭಿಷೇಕ ಮಾಡಿಸಿಕೊಂಡ ರಾಜಪಕ್ಷೆಯವರು ಶೀಘ್ರದಲ್ಲೇ ಸಂಸತ್ ವಿಸರ್ಜಿಸಲಿದ್ದಾರೆ ಎಂಬ ಸುದ್ದಿಗಳು ಮಾಧ್ಯಮ ಹಾಗೂ ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿತ್ತು.
ನಿಗದಿತ ಅವಧಿಗಿಂತ ಎರಡು ತಿಂಗಳ ಮೊದಲೇ ಮಹಾ ಚುನಾವಣೆಗಳು ನಡೆಯಲಿದ್ದು, ಅದಕ್ಕಾಗಿ ರಾಜಪಕ್ಷೆಯವರು ಇದೀಗ ನೆಲೆಗಟ್ಟು ರೂಪಿಸುತ್ತಿದ್ದಾರೆ. ಸಂಸತ್ತಿನ ಅಧಿಕಾರವಧಿ ಏಪ್ರಿಲ್ನಲ್ಲಷ್ಟೇ ಕೊನೆಗೊಳ್ಳಬೇಕಿತ್ತು.
ಚುನಾವಣೆಗಳು ಏಪ್ರಿಲ್ 8ರಂದು ನಡೆಯಲಿದೆ ಎಂದು ಹೇಳಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಫೆಬ್ರವರಿ 19ರಿಂದ 26ರವರೆಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ರಾಜಪಕ್ಷೆಯವರ ಹತ್ಯೆ ಸಂಚು ರೂಪಿಸಿದ್ದಾರೆ ಎಂದು ಬಂಧನಕ್ಕೊಳಗಾದ ಮರುದಿನವೇ ಇಂತದ್ದೊಂದು ಆದೇಶ ಬಂದಿರುವುದು ಕುತೂಹಲ ಹುಟ್ಟಿಸಿದೆ. ಅವರೀಗ ಕೋರ್ಟ್ ಮಾರ್ಷಲ್ ಎದುರಿಸುವ ಭೀತಿಯಲ್ಲಿದ್ದಾರೆ.