ಭಾರತದೊಂದಿಗೆ ಯುದ್ಧವಿಲ್ಲ, ಇದು ಈಗಿನ ಅಭಿಪ್ರಾಯ: ಪಾಕಿಸ್ತಾನ
ಇಸ್ಲಾಮಾಬಾದ್, ಗುರುವಾರ, 11 ಫೆಬ್ರವರಿ 2010( 10:40 IST )
ಯುದ್ಧಕ್ಕಿಂತ ಮಾತುಕತೆಯೇ ಉತ್ತಮ ಮಾರ್ಗ ಎಂದು ಪಾಕಿಸ್ತಾನವು ಯಾವತ್ತೂ ಹೇಳುತ್ತಾ ಬಂದಿದೆ. ಭಾರತದಿಂದ ಭೀತಿಯೆದುರಾಗಬಹುದು ಎಂಬು ಅರಿವು ಇರುವುದರಿಂದ ಎರಡೂ ದೇಶಗಳ ನಡುವಿನ ಪರಿಹಾರವಾಗದ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲು ನಾವು ಮುಂದಾಗಿದ್ದೇವೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ತಿಳಿಸಿದ್ದಾರೆ.
ನಮ್ಮ ನಡುವೆ ಯುದ್ಧ ನಡೆಯುವುದಿಲ್ಲ ಎಂದು ಹೇಳುವಾಗ ಅಲ್ಲಿ ಆಶಯವಿರುತ್ತದೆ. ಆದರೆ ಇಂತಹ ಅಭಿಪ್ರಾಯಗಳು ಯಾವುದೇ ಸಮಯದಲ್ಲಿ ಬದಲಾಗಬಹುದು. ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅಲ್ಲಿ ಬೆದರಿಕೆಯ ದೃಷ್ಟಿಕೋನವಿದೆ. ಹಾಗಾಗಿ ನಾವು ಮಾತುಕತೆಯನ್ನು ಬಯಸುತ್ತಿದ್ದೇವೆ ಎಂದು ವಾರ್ತಾವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಗಿಲಾನಿ ತಿಳಿಸಿದ್ದಾರೆ.
PTI
ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಶ್ಫಕ್ ಫರ್ವೇಜ್ ಖಯಾನಿಯವರ ವ್ಯತಿರಿಕ್ತ ಹೇಳಿಕೆಗಳ ಕುರಿತು ಪ್ರಶ್ನಿಸಿದಾಗ ಗಿಲಾನಿ ಈ ರೀತಿ ಪ್ರತಿಕ್ರಿಯೆ ನೀಡಿದರು.
ಭಾರತದಿಂದ ಯಾವುದೇ ಬೆದರಿಕೆಗಳಿಲ್ಲ ಎಂದು ಜರ್ದಾರಿಯವರು ಹೇಳಿದ್ದರೆ, ಪಾಕಿಸ್ತಾನ ಸೇನೆಯು ಭಾರತವನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುತ್ತಿದೆ ಎಂದು ಖಯಾನಿ ತಿಳಿಸಿದ್ದರು.
ಮಾತು ಮುಂದುವರಿಸಿದ ಗಿಲಾನಿ, ಎರಡೂ ದೇಶಗಳ ಶಸ್ತ್ತಾಸ್ತ್ರ ಪಡೆಗಳು ಸಹಜವಾಗಿ ಪರಸ್ಪರ ಕೇಂದ್ರೀಕೃತವಾಗಿವೆ ಎಂಬುದನ್ನು ಒಪ್ಪಿಕೊಂಡರು.
ಅದೇ ಹೊತ್ತಿಗೆ ಭಾರತವು ಮಾತುಕತೆ ಪುನರಾರಂಭಕ್ಕೆ ಮುಂದಾಗಿರುವುದನ್ನು ಪ್ರಶಂಸಿಸಿರುವ ಅವರು, ಪಾಕಿಸ್ತಾನವು ಯುದ್ಧಕ್ಕಿಂತ ಹೆಚ್ಚು ಮಾತುಕತೆಗೆ ಒತ್ತು ಕೊಡುತ್ತದೆ ಎಂದರು.
ರಾಜಕಾರಣಿಗಳು ಸೇತುವೆ ಕಟ್ಟುತ್ತಾರೆ, ಗೋಡೆಗಳನ್ನಲ್ಲ ಎಂದು ಉಭಯ ದೇಶಗಳ ನಡುವಿನ ಮಾತುಕತೆ ಪುನರಾರಂಭ ಮುನ್ಸೂಚನೆಗಳನ್ನು ಗಿಲಾನಿ ಇದೇ ಸಂದರ್ಭದಲ್ಲಿ ಬಣ್ಣಿಸಿದ್ದಾರೆ.
ಸ್ಥಗಿತಗೊಂಡಿರುವ ಮಾತುಕತೆಗಳನ್ನು ಪುನರಾರಂಭಗೊಳಿಸುವುದಕ್ಕೆ ಭಾರತ ಸರಕಾರದ ಆಡಳಿತ ಪಕ್ಷ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ ಎಂಬುದರತ್ತ ಬೆಟ್ಟು ಮಾಡಿ ತೋರಿಸಿದರು.