ಶ್ರೀಲಂಕಾ ಅಧ್ಯಕ್ಷ ಮಹೀಂದ ರಾಜಪಕ್ಸೆ ಅವರ ಹತ್ಯಾ ಸಂಚಿನ ಆರೋಪ ಎದುರಿಸುತ್ತಿರುವ ಮಿಲಿಟರಿಯ ಮಾಜಿ ವರಿಷ್ಠ ಸರತ್ ಫೋನ್ಸೆಕಾ ಅವರು ಶೀಘ್ರವೇ ಕೋರ್ಟ್ ಮಾರ್ಷಲ್ಗೆ ಒಳಗಾಗಲಿದ್ದು, ಸುಮಾರು ಐದು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ಲಂಕಾ ರಕ್ಷಣಾ ಕಾರ್ಯದರ್ಶಿ ಗೋಟಾಬಯಾ ರಾಜಪಕ್ಸೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷ ರಾಜಪಕ್ಸೆ ಅವರ ಸಹೋದರರಾಗಿರುವ ಗೋಟಾಬಯಾ ಸಿಂಗಾಪೂರ್ ಸ್ಟ್ರೇಟ್ಸ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ,ಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸೆ ಅವರು ಜಯಭೇರಿ ಬಾರಿಸಿದ ನಂತರ ದೇಶದಲ್ಲಿ ಮಿಲಿಟರಿ ಆಡಳಿತ ಹೇರಲು ಫೋನ್ಸೆಕಾ ಸಂಚು ರೂಪಿಸಿದ್ದರು ಎಂದು ಆಪಾದಿಸಿದ್ದಾರೆ.
ಅಲ್ಲದೇ ಕಳೆದ ವರ್ಷ ಎಲ್ಟಿಟಿಇ ವಿರುದ್ಧ ನಡೆದ ಹೋರಾಟದಲ್ಲಿ ಸೆರೆಸಿಕ್ಕ ಎಲ್ಟಿಟಿಇಯವರನ್ನು ನನ್ನ ಆದೇಶದ ಮೇರೆಗೆ ಗುಂಡಿಕ್ಕಿ ಕೊಲ್ಲಲಾಯಿತು ಎಂಬ ಫೋನ್ಸೆಕಾ ಅವರ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಗೋಟಾಬಯಾ ಸ್ಪಷ್ಟಪಡಿಸಿದರು.
ಮಹೀಂದ ರಾಜಪಕ್ಸೆ ಅವರನ್ನು ಕೊಲ್ಲಲು ಸಂಚು ರೂಪಿಸಿರುವ ಆಪಾದನೆ ಮೇಲೆ ಫೋನ್ಸೆಕಾ ಅವರನ್ನು ಸೋಮವಾರ ರಾತ್ರಿ ಮಿಲಿಟರಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಆರೋಪ ಎದುರಿಸುತ್ತಿರುವ ಫೋನ್ಸೆಕಾ ಅವರು ಕೋರ್ಟ್ ಮಾರ್ಷಲ್ ಎದುರಿಸಲಿದ್ದು, ಐದು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇರುವುದಾಗಿ ಹೇಳಿದರು.