ಇಸ್ಲಾಮಾಬಾದ್, ಶನಿವಾರ, 13 ಫೆಬ್ರವರಿ 2010( 17:07 IST )
ಮುಂಬೈ ದಾಳಿ ಪ್ರಕರಣದ ಆರೋಪಿಗಳಾದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ ಝಾಕಿರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಮಂದಿ ಶಂಕಿತರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಬಿಡುವಿಲ್ಲದ ಕಾರಣ ವಾರಗಳ ಮಟ್ಟಿಗೆ ಮುಂದೂಡಿದ್ದಾರೆ.
ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಧೀಶ ಮಲಿಕ್ ಮುಹಮ್ಮದ್ ಅಕ್ರಮ್ ಅವರಿಗೆ ತುರ್ತು ಕೆಲಸವಿರುವ ಕಾರಣ ಇಂದು ಮುಂಬೈ ದಾಳಿಯ ಸಂಬಂಧದ ಪ್ರಕರಣದ ವಿಚಾರಣೆಯನ್ನು ನಡೆಸಲಾಗಿಲ್ಲ ಎಂದು ಆರೋಪಿಗಳ ಪರ ವಕೀಲ ಶಾಹ್ಬಾಜ್ ರಾಜ್ಪೂತ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮುಂದಿನ ವಿಚಾರಣೆ ಫೆಬ್ರವರಿ 20ರಂದು ನಡೆಯಲಿದೆ ಎಂದು ನಿಗದಿಯಾಗಿದೆ. ಆದರೆ ಅದೇ ದಿನ ಬಾರ್ ಕೌನ್ಸಿಲ್ ಚುನಾವಣೆಗಳು ನಡೆಯಲಿವೆ ಎಂದು ಹೇಳಿರುವುದರಿಂದ ಅಂದು ಕೂಡ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ಹೇಳಿವೆ.
ಸುರಕ್ಷತೆಯ ದೃಷ್ಟಿಯಿಂದ ರಾವಲ್ಪಿಂಡಿಯ ಆಡಿಯಾಲ ಜೈಲಿನಲ್ಲಿ ನಡೆಸಲಾಗುತ್ತಿರುವ ಪ್ರಕರಣದ ವಿಚಾರಣೆ ಫೆಬ್ರವರಿ 27ರಂದು ಮತ್ತೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ 2008ರ ನವೆಂಬರ್ನಲ್ಲಿ ನಡೆದ ದಾಳಿ ನಡೆಸಿದ ಮತ್ತು ಪಿತೂರಿ ನಡೆಸಿದ ಆರೋಪವನ್ನು ಲಖ್ವಿ, ಜರಾರ್ ಶಾಹ್, ಅಬೂ ಅಲ್ ಖಾಮಾ, ಹಮಾದ್ ಅಮೀನ್ ಸಾದಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಸ್ ಅಂಜುಮ್ ಮೇಲೆ ಕಳೆದ ವರ್ಷ ಹೊರಿಸಲಾಗಿತ್ತು.
ಮುಂಬೈ ದಾಳಿಯ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷ್ಯಗಳಿವೆ. ನಮ್ಮಲ್ಲಿ 161 ಪುರಾವೆಗಳಿವೆ ಎಂದು ಪಾಕಿಸ್ತಾನದ ತನಿಖಾ ದಳಗಳು ಹೇಳಿವೆ ಎಂದು ಸರಕಾರಿ ವಿಶೇಷ ವಕೀಲ ಮಲಿಕ್ ರಾಬ್ ನವಾಜ್ ನೂನ್ ತಿಳಿಸಿದ್ದಾರೆ.
ಏಳು ಮಂದಿ ಶಂಕಿತರ ವಿಚಾರಣೆಗಾಗಿ ರಾವಲ್ಪಿಂಡಿಯಲ್ಲಿ ಸ್ಥಾಪಿಸಲಾಗಿರುವ ಭಯೋತ್ಪಾದನಾ ತಡೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ಪಾಕಿಸ್ತಾನ ಸರಕಾರವು ವಿಶೇಷ ವಕೀಲರನ್ನಾಗಿ ನೂನ್ ಅವರನ್ನು ನೇಮಿಸಿತ್ತು.