ಅಮೆರಿಕ ಮೂಲದ ಲಷ್ಕರ್ ಉಗ್ರ ಡೇವಿಡ್ ಹೆಡ್ಲಿ ಪುಣೆ ಬಾಂಬ್ಸ್ಫೋಟದ ಸಂಚು ರೂಪಿಸಿರಬಹುದು ಎನ್ನುವ ಶಂಕೆಯ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಹಲವು ಸಮಸ್ಯೆಗಳ ಬಗ್ಗೆ ಭಿನ್ನಾಭಿಪ್ರಾಯಗಳ ಮಧ್ಯೆಯು, ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಫೆಬ್ರವರಿ25ರಂದು ಮಾತುಕತೆ ನಡೆಸಲು ನಿರ್ಧರಿಸಿದ್ದರು. ಆದರೆ ಪುಣೆಯಲ್ಲಿ ನಡೆದ ಉಗ್ರರ ದಾಳಿಯ ನಂತರ ಮಾತುಕತೆಗಳು ಸ್ಥಗಿತಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.
ಪಾಕಿಸ್ತಾನ ನಿರಂತರವಾಗಿ ಲಷ್ಕರ್ ಹಾಗೂ ಪಾಕಿಸ್ತಾನದ ತಾಲಿಬಾನ್ ಮಧ್ಯೆ ಭಿನ್ನ ನಿಲುವುಗಳನ್ನು ತಳೆಯುತ್ತಿದೆ ಎಂದು ಅಮೆರಿಕದ ಗುಪ್ತಚರ ದಳಗಳು ಆರೋಪಿಸಿವೆ.ಆದರೆ ಬಂಧಿತ ಹೆಡ್ಲಿ, ಲಷ್ಕರ್ ಉಗ್ರಗಾಮಿ ಸಂಘಟನೆಗೆ ಭಾರತದ ಪ್ರಮುಖ ತಾಣಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವುದು ಖಚಿತವಾಗಿದೆ ಎಂದು ಭಾರತ ಮತ್ತು ಎಫ್ಬಿಐ ಸಂಸ್ಥೆಗಳು ತಿಳಿಸಿವೆ.
ಪುಣೆಯ ಕೋರೆಗಾಂವ್ ಪಾರ್ಕ್ನಲ್ಲಿರುವ ಜರ್ಮನ್ ಬೇಕರಿ, ಸದಾ ವಿದೇಶಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ವಿದೇಶಿ ನಾಗರಿಕರನ್ನು ಗುರಿಯಾಗಿಸಿಕೊಂಡು ಬಾಂಬ್ಸ್ಫೋಟ ನಡೆಸಲಾಗಿದೆ ಎಂದು ಭಾರತದ ಗುಪ್ತಚರ ದಳಗಳು ಶಂಕೆ ವ್ಯಕ್ತಪಡಿಸಿವೆ.