ಪ್ರಜಾಪ್ರಭುತ್ವಕ್ಕೆ ಜರ್ದಾರಿ ದೊಡ್ಡ ಬೆದರಿಕೆ: ನವಾಜ್ ಶರೀಫ್
ಇಸ್ಲಾಮಾಬಾದ್, ಸೋಮವಾರ, 15 ಫೆಬ್ರವರಿ 2010( 20:12 IST )
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಬೆದರಿಕೆ ಎಂದು ಬಣ್ಣಿಸಿರುವ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಶರೀಫ್, ನ್ಯಾಯಾಂಗದ ಮೇಲೆ ಅವರ ಪಕ್ಷದ ನೇತೃತ್ವದ ಸರಕಾರ ಅವಿವೇಕದ ನಿರ್ಧಾರಗಳಿಗೆ ಮುಂದಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿಯವರ ಶಿಫಾರಸಿಗೆ ವಿರುದ್ಧವಾಗಿ ಜರ್ದಾರಿಯವರು ನೇಮಕ ಮಾಡಿದ್ದ ಎರಡು ನ್ಯಾಯಮೂರ್ತಿಗಳ ಆಯ್ಕೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಒಂದು ದಿನದ ನಂತರ ಶರೀಫ್ ಈ ವಾಗ್ದಾಳಿ ನಡೆಸಿದ್ದಾರೆ.
ಸುಪ್ರೀಂ ಕೋರ್ಟಿನ ಈ ದಿಟ್ಟ ನಿರ್ಧಾರದಿಂದ ಪಾಕಿಸ್ತಾನ ಪ್ಯೂಪಲ್ಸ್ ಪಾರ್ಟಿ ಮತ್ತು ನ್ಯಾಯಾಂಗವು ಮುಖಾಮುಖಿಯಾಗುತ್ತಿವೆ ಎಂಬ ಭೀತಿಯುಂಟಾಗಿದೆ.
ಈ ಸಂಬಂಧ ಜರ್ದಾರಿಯವರನ್ನು ಟೀಕಿಸಿರುವ ಶರೀಫ್, ಅಧ್ಯಕ್ಷರು ನ್ಯಾಯಾಧೀಶರ ಆಯ್ಕೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ಜರ್ದಾರಿಯವರ ನಡೆಗಳು 2007ರ ನವೆಂಬರ್ನಲ್ಲಿ ಮಾಜಿ ಮಿಲಿಟರಿ ಮುಖ್ಯಸ್ಥ ಫರ್ವೇಜ್ ಮುಶರಫ್ ಹೇರಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿವೆ. ಆ ಸಂದರ್ಭದಲ್ಲಿ ಸರ್ವಾಡಳಿತಾಧಿಕಾರಿ ಪ್ರವೃತ್ತಿಯಿಂದ ನ್ಯಾಯಾಂಗದ ಮೇಲೆ ಅವರು ದಾಳಿ ನಡೆಸಿದ್ದರೆ, ಈಗ ಅಧ್ಯಕ್ಷರು ಎಲ್ಲಾ ಮಿತಿಗಳನ್ನು ಉಲ್ಲಂಘಿಸುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯೆನಿಸುವ ಕೃತ್ಯವನ್ನು ಇಂದು ಅವರು ಎಸಗಿರುವ ಪ್ರಮಾದಕ್ಕೆ ಮುಂದಾಗುತ್ತಾರೆ ಎಂದು ನಾನೆಂದೂ ಯೋಚಿಸಿರಲಿಲ್ಲ. ಪ್ರಜಾಪ್ರಭುತ್ವಕ್ಕೆ ಏನಾದರೂ ಬೆದರಿಕೆಯಿದ್ದರೆ ಅದು ಜರ್ದಾರಿಯವರ ಕ್ರಮಗಳಿಂದ ಮಾತ್ರ. ನನ್ನ ಪ್ರಕಾರ ಇಂದು ಪ್ರಜಾಪ್ರಭುತ್ವಕ್ಕೆ ಬೃಹತ್ ಬೆದರಿಕೆಯಾಗಿರುವವರು ಜರ್ದಾರಿ ಎಂದು ಕಟುವಾಗಿ ಅಧ್ಯಕ್ಷರನ್ನು ಟೀಕಿಸಿದ್ದಾರೆ.