ಭಾರತಕ್ಕೆ ಹೋಗ್ಬೇಡಿ; ಕ್ರೀಡಾಪಟುಗಳಿಗೆ ಉಗ್ರರಿಂದ ಎಚ್ಚರಿಕೆ
ಇಸ್ಲಾಮಾಬಾದ್, ಮಂಗಳವಾರ, 16 ಫೆಬ್ರವರಿ 2010( 14:36 IST )
ಭಾರತದಾದ್ಯಂತ ದಾಳಿಗಳನ್ನು ನಡೆಸುವ ಬೆದರಿಕೆ ಹಾಕಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಸಂಘಟನೆ 'ಹುಜಿ' ಮುಂಬರುವ ಹಾಕಿ ವಿಶ್ವಕಪ್, ಐಪಿಎಲ್ ಮತ್ತು ಕಾಮನ್ವೆಲ್ತ್ ಗೇಮ್ಸ್ಗಳಿಗಾಗಿ ಭಾರತಕ್ಕೆ ಪ್ರವಾಸ ಮಾಡಬಾರದು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಎಚ್ಚರಿಕೆ ನೀಡಿದೆ.
ಭಾರತದ ಮೇಲೆ ಮತ್ತಷ್ಟು ದಾಳಿಗಳನ್ನು ಮುಂದುವರಿಸುವುದಾಗಿ ಅಲ್ಖೈದಾದ ಕಾರ್ಯಕಾರಿ ಪಡೆಯನ್ನು ಹೊಂದಿರುವ ಪಾಕಿಸ್ತಾನದ ಮಾಜಿ ಕಮಾಂಡೋ ಹಾಗೂ 'ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ' ಸಂಘಟನೆಯ ಮುಖ್ಯಸ್ಥ ಇಲ್ಯಾಸ್ ಕಾಶ್ಮೀರಿ ಎಚ್ಚರಿಕೆ ನೀಡಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಭಾರತಕ್ಕೆ ಭೇಟಿ ನೀಡಿದಲ್ಲಿ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಬೆದರಿಕೆ ಹಾಕಿದ್ದಾನೆ.
2010ರ ಹಾಕಿ ವಿಶ್ವಕಪ್, ಐಪಿಎಲ್ ಮತ್ತು ಕಾಮನ್ವೆಲ್ತ್ಗಾಗಿ ತಮ್ಮ ಕ್ರೀಡಾಪಟುಗಳು ಅಥವಾ ಪ್ರತಿನಿಧಿಗಳನ್ನು ಭಾರತಕ್ಕೆ ಕಳುಹಿಸಬಾರದು ಅಥವಾ ಪ್ರವಾಸ ಮಾಡಬಾರದು ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಹಾಗೆಲ್ಲಾದರೂ ಪ್ರವಾಸ ಮಾಡಿದಲ್ಲಿ ಅದರ ಪರಿಣಾಮಗಳಿಗೂ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಹುಜಿ ಸಂಘಟನೆಯ ತಲೆಮರೆಸಿಕೊಂಡಿರುವ ಪಿಒಕೆ ಮುಖ್ಯಸ್ಥ 'ಏಷಿಯಾ ಟೈಮ್ಸ್' ಆನ್ಲೈನ್ಗೆ ಕಳುಹಿಸಿರುವ ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಾನೆ.
ಪುಣೆ ಬಾಂಬ್ ಸ್ಫೋಟ ನಡೆದ ನಂತರ ಈ ಸಂದೇಶವನ್ನು ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ರವಾನಿಸಿದ್ದಾನಾದರೂ, ಘಟನೆಯ ಹೊಣೆ ಹೊತ್ತುಕೊಳ್ಳುವ ಕುರಿತು ನಿರ್ದಿಷ್ಟವಾಗಿ ಮಾತನಾಡಿಲ್ಲ.
ಆತನ ಸಂದೇಶವು ಬಾಂಬ್ ಸ್ಫೋಟದ ಹೊಣೆಯನ್ನು ನಿರ್ದಿಷ್ಟವಾಗಿ ಹೊತ್ತುಕೊಂಡಿಲ್ಲವಾದರೂ, ಆತನ ಬ್ರಿಗೇಡ್ ಇದರಲ್ಲಿ ಪಾಲ್ಗೊಂಡಿರುವುದರ ಪರೋಕ್ಷ ಸೂಚನೆಯನ್ನು ರವಾನಿಸಿದ್ದಾನೆ ಎಂದು ಇಸ್ಲಾಮಾಬಾದ್ನಿಂದ ಮಾಡಿರುವ ವರದಿಯಲ್ಲಿ ಸುದ್ದಿ ಪೋರ್ಟಲ್ ಒಂದು ತಿಳಿಸಿದೆ.
ಲಷ್ಕರ್ ಇ ತೋಯ್ಬಾದ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ಕಾಶ್ಮೀರಿ 2008ರ ಮುಂಬೈ ಭಯೋತ್ಪಾದನಾ ದಾಳಿಗಾಗಿ ಯೋಜನೆ ರೂಪಿಸಲು ನಿಯೋಜಿಸಿದ್ದ ಎಂದು ಹೇಳಲಾಗಿದೆ. ಹೆಡ್ಲಿ ಪ್ರಸಕ್ತ ಅಮೆರಿಕಾದ ವಶದಲ್ಲಿದ್ದಾನೆ.