ಭಾರತಕ್ಕೆ ಗುಪ್ತಚರ ಸಹಕಾರ ವಿಸ್ತರಿಸಲು ಸಿದ್ಧ: ಪಾಕಿಸ್ತಾನ
ಇಸ್ಲಾಮಾಬಾದ್, ಮಂಗಳವಾರ, 16 ಫೆಬ್ರವರಿ 2010( 19:00 IST )
ಭಾರತ-ಪಾಕಿಸ್ತಾನ ಮಾತುಕತೆ ಉತ್ಸುಕತೆಯಲ್ಲಿರುವ ನಡುವೆಯೇ ಪುಣೆ ಸ್ಫೋಟದಂತಹ ದಾಳಿಗಳು ಮತ್ತೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಭಾರತಕ್ಕೆ ಗುಪ್ತಚರ ಸಹಕಾರಗಳನ್ನು ವಿಸ್ತರಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಹೇಳಿದ್ದಾರೆ.
ಅಮೆರಿಕಾ ಸೆನೆಟರ್ ಹಾಗೂ ವಿದೇಶಾಂಗ ವ್ಯವಹಾರಗಳ ಸೆನೆಟ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಾನ್ ಕೆರ್ರಿಯವರನ್ನು ಭೇಟಿ ಸಂದರ್ಭದಲ್ಲಿ ಗಿಲಾನಿ ಇದನ್ನು ತಿಳಿಸಿದ್ದಾರೆ.
ಅಲ್ಲದೆ ಎರಡು ದೇಶಗಳ ನಡುವಿನ ಪರಿಹಾರವಾಗದೇ ಉಳಿದಿರುವ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಶಾಂತಿಯುತ ಮತ್ತು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳುವ ನಿಲುವಿಗೆ ಪಾಕಿಸ್ತಾನ ಬದ್ಧವಾಗಿದೆ ಎಂದರು.
ಇತ್ತೀಚಿನ ಪುಣೆ ಮೇಲಿನ ದಾಳಿಯನ್ನು ಖಂಡಿಸಿರುವ ಪ್ರಧಾನ ಮಂತ್ರಿಗಳು, ಘಟನೆಯಲ್ಲಿ ಸಾವನ್ನಪ್ಪಿರುವವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂದೆ ಭಯೋತ್ಪಾದಕರು ನಡೆಸಲುದ್ದೇಶಿಸಿರುವ ಮತ್ತಷ್ಟು ದಾಳಿಗಳನ್ನು ತಡೆಯಲು ಯತ್ನಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಬೇಹುಗಾರಿಕಾ ಸಹಕಾರವನ್ನು ವೃದ್ಧಿಸಲು ಸರಕಾರ ಸಿದ್ಧವಿದೆ ಎಂದು ಪ್ರಧಾನ ಮಂತ್ರಿಯವರ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
2008ರ ಮುಂಬೈ ದಾಳಿ ಬಳಿಕ ನಡೆದ ಮೊದಲ ಭಯೋತ್ಪಾದಕ ದಾಳಿ ಫೆಬ್ರವರಿ 13ರ ಪುಣೆ ಬಾಂಬ್ ಸ್ಫೋಟದಲ್ಲಿ 10 ಮಂದಿ ಸಾವನ್ನಪ್ಪಿದ್ದು, 57 ಮಂದಿ ಗಾಯಗೊಂಡಿದ್ದರು.
ಮುಂಬೈ ದಾಳಿಯ ಪಿತೂರಿದಾರರನ್ನು ನ್ಯಾಯಾಂಗದ ಕಟಕಟೆಗೆ ತರುವಲ್ಲಿ ಪಾಕಿಸ್ತಾನವು ಪ್ರಗತಿಯನ್ನು ಕಂಡಿದೆ. ಅಲ್ಲದೆ ತನ್ನ ನೆಲದಿಂದ ಪಕ್ಕದ ದೇಶಗಳ ಮೇಲಿನ ದಾಳಿಗೆ ಸಂಚು ರೂಪಿಸಲು ಅವಕಾಶ ನೀಡದ ನಿಲುವಿಗೆ ಬದ್ಧವಾಗಿದೆ ಎಂದು ಗಿಲಾನಿ ತಿಳಿಸಿದ್ದಾರೆ.
ಕಳೆದ ವರ್ಷದ ಜುಲೈ ತಿಂಗಳಲ್ಲಿ ಶರ್ಮ್ ಇ ಶೇಖ್ನಲ್ಲಿ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರೊಂದಿಗೆ ಬಿಡುಗಡೆ ಮಾಡಿದ್ದ ಜಂಟಿ ಹೇಳಿಕೆಗೆ ಪಾಕಿಸ್ತಾನ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.