ರಾಜಪಕ್ಸೆ ಗೆಲುವು ಪ್ರಶ್ನಿಸಿ ಫೋನ್ಸೆಕಾ ಸುಪ್ರೀಂ ಕಟಕಟೆಗೆ
ಕೊಲಂಬೊ, ಮಂಗಳವಾರ, 16 ಫೆಬ್ರವರಿ 2010( 19:08 IST )
ಜನವರಿ 26ರಂದು ಹೊರಬಿದ್ದ ಶ್ರೀಲಂಕಾ ಅಧ್ಯಕ್ಷಗಾದಿ ಚುನಾವಣೆಯ ಫಲಿತಾಂಶದ ವಿರುದ್ಧ ಪರಾಜಿತ ಅಭ್ಯರ್ಥಿ ಮಿಲಿಟರಿ ಮಾಜಿ ಅಧಿಕಾರಿ ಸರತ್ ಫೋನ್ಸೆಕಾ ಅವರು ಮಂಗಳವಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪುನರಾಯ್ಕೆಗೊಂಡ ಮಹೀಂದ ರಾಜಪಕ್ಸೆ ಅಕ್ರಮ ಮತದಾನದ ಮೂಲಕ ಜಯಗಳಿಸಿರುವುದಾಗಿ ದೂರಿದ್ದಾರೆ. ಆ ನಿಟ್ಟಿನಲ್ಲಿ ಇಂದು ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್ನಲ್ಲಿ ರಾಜಪಕ್ಸೆ ಗೆಲುವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣೆಯಲ್ಲಿ ಚುನಾವಣಾ ಆಯುಕ್ತ ದಯಾನಂದಾ ದಿಸ್ಸಾನಾಯಕೆ ಮತ್ತು ಇಪ್ಪತ್ತು ಮಂದಿ ಅಧಿಕಾರಿಗಳ ಶಾಮೀಲಿನೊಂದಿಗೆ ಮತದಾನದಲ್ಲಿ ಅಕ್ರಮ ನಡೆಸಿರುವುದಾಗಿ ಫೋನ್ಸೆಕಾ ದೂರಿನಲ್ಲಿ ಆರೋಪಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಜಿತಗೊಂಡ ಸಂದರ್ಭದಲ್ಲಿ ಅಧ್ಯಕ್ಷ ಮಹೀಂದ ರಾಜಪಕ್ಸೆ ಅವರನ್ನು ಹತ್ಯೆಗೈಯುವ ಸಂಚು ರೂಪಿಸಿರುವ ಹಾಗೂ ಮಿಲಿಟರಿ ಆಡಳಿತ ಹೇರುವ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿ ಫೋನ್ಸೆಕಾ ಅವರನ್ನು ಬಂಧಿಸಲಾಗಿದೆ.