ಮನೆ ದರೋಡೆಗೆ ನಡೆಸಿದ್ದಾರೆಂಬ ಆರೋಪದ ಮೇಲೆ ಮೂರು ಮಂದಿ ಭಾರತೀಯರು ಸ್ಥಳೀಯರ ಆಕ್ರೋಶಕ್ಕೆ ಬಲಿಯಾಗಿರುವ ಘಟನೆ ನೇಪಾಳದಲ್ಲಿ ಬುಧವಾರ ನಡೆದಿದೆ.
ಪೂರ್ವ ನೇಪಾಳದ ಜಾಪಾ ಜಿಲ್ಲೆಯಲ್ಲಿ ಕಳೆದ ರಾತ್ರಿ ಶಸ್ತ್ರ ಸಜ್ಜಿತ 15ಮಂದಿ ಮುಸುಧಾರಿಗಳ ಗುಂಪಿನ ಮೇಲೆ ಸ್ಥಳೀಯರು ಪ್ರತೀಕಾರದ ದಾಳಿ ನಡೆಸಿದ ಸಂದರ್ಭದಲ್ಲಿ ಇಬ್ಬರು ಗಾಯಗೊಂಡಿರುವುದಾಗಿ ಪೊಲೀಸ್ ವಕ್ತಾರ ಬಿಗ್ಯಾನ್ ರಾಜ್ ಶರ್ಮಾ ತಿಳಿಸಿದ್ದಾರೆ.
ಕಳೆದ ರಾತ್ರಿ ಭೂಮಿ ರಾಜ್ಬನ್ಸಿ ಅವರ ಮನೆ ದರೋಡೆ ನಡೆಸಿದ್ದ ಗುಂಪೊಂದರ ಮೇಲೆ ಸ್ಥಳೀಯರು ಪ್ರತೀಕಾರದ ದಾಳಿ ನಡೆಸಿದ ಪರಿಣಾಮ ಬಿಹಾರ ಮೂಲದ 3ಮಂದಿ ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ದರೋಡೆ ಮಾಡಿ ಹೊರ ಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರ ಗಮನಕ್ಕೆ ಬಂದಿತ್ತು. ಕೂಡಲೇ ಸ್ಥಳೀಯರು ಅವರ ಬೆನ್ನಟ್ಟಿ ಹೋಗಿ ಗ್ರಾಮದಿಂದ ಸುಮಾರು 1ಕಿ.ಮೀ.ದೂರದಲ್ಲಿ ಅಟ್ಟಾಡಿಸಿಕೊಂಡು ಬಡಿದ ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದರು. ಉಳಿದ ದರೋಡೆಕೋರರು ಪರಾರಿಯಾಗಿದ್ದಾರೆ.
ರಾಜ್ಬನ್ಸಿ ಮನೆಯಿಂದ ದರೋಡೆಕೋರರು 650,000 ಮೌಲ್ಯ ರೂಪಾಯಿಗಳ ನಗದು ಮತ್ತು ಚಿನ್ನ ದರೋಡೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿದಿರುವುದಾಗಿ ಹೇಳಿದ್ದಾರೆ.