ಕಸಬ್ ನನಗೆ ಗೊತ್ತಿಲ್ಲ, ಯಾವತ್ತೂ ಭೇಟಿಯಾಗಿಲ್ಲ: ಹಫೀಜ್ ಸೈಯದ್
ಇಸ್ಲಾಮಾಬಾದ್, ಗುರುವಾರ, 18 ಫೆಬ್ರವರಿ 2010( 15:00 IST )
2008ರ ಮುಂಬೈ ಹತ್ಯಾಕಾಂಡದಲ್ಲಿ ಬದುಕುಳಿದಿರುವ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್ನನ್ನು ನಾನು ಯಾವತ್ತೂ ನೋಡಿಲ್ಲ ಎಂದು ಮುಂಬೈ ದಾಳಿಯ ಹಿಂದಿನ ರೂವಾರಿ, ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯದ್ ಬುಧವಾರ ಹೇಳಿಕೊಂಡಿದ್ದಾನೆ.
ಕಸಬ್ನನ್ನು ಯಾವತ್ತೂ ನಾನು ನೋಡಿಲ್ಲ. ಆತ ಪಾಕಿಸ್ತಾನಿ ಪ್ರಜೆಯೆಂದು ನಾನು ಹೇಳಿದ್ದೇನೆಂಬುದು ಬಂದಿರುವುದು ಭಾರತೀಯ ಮಾಧ್ಯಮಗಳಿಂದ. ನಾನು ಯಾವತ್ತೂ ಕಸಬ್ನನ್ನು ಭೇಟಿಯಾಗಿಲ್ಲ. ಆತನ ಬಗ್ಗೆ ನನಗೇನೂ ತಿಳಿದಿಲ್ಲ. ಇದನ್ನು ಹಲವಾರು ಬಾರಿ ಹೇಳುತ್ತಾ ಬಂದಿದ್ದೇನೆ. ಆಧಾರವಿಲ್ಲದೆ ಅಪಪ್ರಚಾರ ಮಾಡಲಾಗುತ್ತಿದೆಯಷ್ಟೇ ಎಂದು ಹಫೀಜ್ ತಿಳಿಸಿದ್ದಾನೆ.
PTI
ವಿದೇಶೀಯರೂ ಸೇರಿದಂತೆ 166 ಮಂದಿಯ ಸಾವಿಗೆ ಕಾರಣವಾದ ಮುಂಬೈ ದಾಳಿಯನ್ನು ಲಷ್ಕರ್ ಇ ತೋಯ್ಬಾದ ಉಪ ಸಂಘಟನೆಯಾಗಿರುವ ಜಮಾತ್ ಉದ್ ದಾವಾ ನಡೆಸಿದೆ ಎಂದು ಭಾರತ ಆರೋಪಿಸುತ್ತಿದೆ. ಆದರೆ ತನ್ನ ವಿರುದ್ಧ ಭಾರತ ಮಾಡುತ್ತಿರುವ ಆರೋಪ ಆಧಾರ ರಹಿತವಾದದ್ದು ಎಂದು ಆತ ಹೇಳಿಕೊಂಡಿದ್ದಾನೆ.
ಇದೇ ತಿಂಗಳಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಯ ಬಗ್ಗೆ ಪ್ರತಿಕ್ರಿಯಿಸಿರುವ ಹಫೀಜ್, ಪಾಕಿಸ್ತಾನದೊಂದಿಗಿನ ಮಾತುಕತೆಯಲ್ಲಿ ಭರವಸೆಯನ್ನು ಮರುಗಳಿಸಬೇಕಾದರೆ ಭಾರತವು ಕಾಶ್ಮೀರ ವಿಚಾರವನ್ನು ಪ್ರಮುಖ ವಿವಾದವೆಂದು ಸ್ವೀಕರಿಸಬೇಕು ಎಂದು ಒತ್ತಾಯಿಸಿದ್ದಾನೆ.
ಮುಕ್ತ ಮಾತುಕತೆಯಲ್ಲಿ ಭಾರತ ಈ ಹಿಂದೆ ಯಾವತ್ತೂ ಪ್ರಾಮಾಣಿಕ ಆಸಕ್ತಿಯನ್ನು ತೋರಿಸಿಲ್ಲ. ಅವರೇನಾದರೂ ಅದಕ್ಕೆ ಮುಂದಾಗಿದ್ದರೆ, ಅದು ಅವರ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಮಾತ್ರ. ಅವರು ಮಾತುಕತೆಯಲ್ಲಿ ವಿಶ್ವಾಸವನ್ನು ಮರು ಕ್ರೋಢೀಕರಣಗೊಳಿಸಬೇಕೆಂದು ಬಯಸುತ್ತಿದ್ದಾರಾದರೆ ಕಾಶ್ಮೀರವನ್ನು ಪ್ರಮುಖ ವಿವಾದ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಕತಾರ್ ಮೂಲದ ಅಲ್-ಜಜೀರಾ ವಾರ್ತಾವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾನೆ.