ಇಸ್ಲಾಮಾಬಾದ್, ಶುಕ್ರವಾರ, 19 ಫೆಬ್ರವರಿ 2010( 16:28 IST )
ಮುಂಬರುವ ಭಾರತ ಮತ್ತು ಪಾಕ್ ಕಾರ್ಯದರ್ಶಿಗಳ ಸಭೆಯ ಹಿನ್ನೆಲೆಯಲ್ಲಿ ಭಾರತದ ರಾಯಭಾರಿ ನಿರುಪಮಾ ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಹೇಳಿರುವ ಪಾಕ್ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ಮುಕ್ತವಾಗಿ ಮಾತುಕತೆ ನಡೆಸುವ ಮೂಲಕ ಭಾರತ ಜೊತೆಗಿನ ಸಂಬಂಧವನ್ನು ಸಹಜ ರೀತಿಯಲ್ಲಿ ಮುಂದುವರಿಸುವ ಬಯಕೆಯನ್ನು ಪಾಕ್ ಹೊಂದಿರುವುದಾಗಿ ಹೇಳಿದರು.
ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದ ವಿಶೇಷ ಪ್ರತಿನಿಧಿಯಾಗಿರುವ ಅಮೆರಿಕದ ರಿಚರ್ಡ್ ಹಾಲ್ಬ್ರೂಕ್ ಅವರ ಜೊತೆಗಿನ ಮಾತುಕತೆ ವೇಳೆಯಲ್ಲಿ, ಫೆ.25ರಂದು ಭಾರತದೊಂದಿಗೆ ನಡೆಯಲಿರುವ ಮಾತುಕತೆಯಲ್ಲಿ ಮುಕ್ತ ಮನಸ್ಸು ಹೊಂದಿರುವುದಾಗಿ ಬಶೀರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಭಾರತದ ಜತೆಗಿನ ಬಾಂಧವ್ಯ ಯಥಾಸ್ಥಿತಿಯಲ್ಲೇ ಮುಂದುವರಿಯಬೇಕು ಎಂಬುದು ಪಾಕಿಸ್ತಾನದ ಇಚ್ಛೆಯಾಗಿದೆ. ಆ ನಿಟ್ಟಿನಲ್ಲಿ ಭಾರತದೊಂದಿಗನ ಮಾತುಕತೆ ಅರ್ಥಪೂರ್ಣವಾಗಿರಬೇಕು ಎಂದ ಬಶೀರ್, ಎರಡು ದೇಶಗಳ ನಡುವೆ ದ್ವಿಪಕ್ಷೀಯ ಚರ್ಚೆ ನಡೆಯುವ ಮೂಲಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.