ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ನಲ್ಲಿರುವ ಹಿಂದೂಗಳಿಗೆ ರಕ್ಷಣೆ ಕೊಡಿ: ಹಿಂದೂ ಶಾಸಕ (Pakistan | Hindu legislator | Kishore Kumar | Muttahida Majlis-e-Amal)
ಇಸ್ಲಾಮಾಬಾದ್, ಶನಿವಾರ, 27 ಫೆಬ್ರವರಿ 2010( 11:04 IST )
ಸಿಖ್ರಿಬ್ಬರನ್ನು ಅಪಹರಿಸಿ ತಲೆ ಕಡಿದು ಅಟ್ಟಹಾಸ ಮೆರೆದಿರುವ ತಾಲಿಬಾನ್ ಉಗ್ರರ ಬೀಭತ್ಸ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನದ ಹಿಂದೂ ಶಾಸಕರೊಬ್ಬರು, ಇಲ್ಲಿನ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ನೀಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಾಕಿಸ್ತಾನ ವಾಯುವ್ಯ ಪ್ರಾಂತ್ಯದ ಅಸೆಂಬ್ಲಿಯ ಜನಪ್ರತಿನಿಧಿ ಕಿಶೋರ್ ಕುಮಾರ್ ಅವರು, ಪಾಕಿಸ್ತಾನದಲ್ಲಿನ ವಾಯುವ್ಯ ಪ್ರಾಂತ್ಯದಲ್ಲಿ ಹಿಂದೂ ಸಮುದಾಯದ ಸಿಖ್ರು ಉಗ್ರರ ಭೀತಿಯಲ್ಲಿ ದಿನಕಳೆಯುವಂತಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ರಕ್ಷಣೆ ಒದಗಿಸಬೇಕೆಂದು ಕೋರಿದ್ದಾರೆ.
ಪಾಕ್ನಲ್ಲಿರುವ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಪಾಕ್ ಸರ್ಕಾರ ಸಂವಿಧಾನ ಬದ್ದವಾಗಿ ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಮುತ್ತಾಹಿದಾ ಮಾಜಿಲಿಸ್ ಇ ಅಮಾಲ್ ಪಕ್ಷದ ಶಾಸಕರಾಗಿರುವ ಕಿಶೋರ್ ತಿಳಿಸಿದ್ದಾರೆ.
ಸಿಖ್ ಉದ್ಯಮಿಗಳ ಅಪಹರಣದ ಘಟನೆ ಕೇವಲ ಸ್ಥಳೀಯ ಅಥವಾ ವೈಯಕ್ತಿಕ ವಿಷಯವಲ್ಲ ಎಂದಿರುವ ಅವರು, ಇದು ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ. ಅಲ್ಪಸಂಖ್ಯಾತರು ಉಗ್ರರಿಂದ ಜೀವ ಭಯ ಎದುರಿಸುತ್ತಿದ್ದಾರೆ ಎಂದು ಪಿಟಿಐಗೆ ವಿವರಿಸಿದ್ದಾರೆ.