ಕಳೆದ ವಾರ ಸಂಭವಿಸಿದ ಕಾರ್ ಬಾಂಬ್ ಮತ್ತು ಆತ್ಮಹತ್ಯಾ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾದ ಕೈವಾಡ ಇರುವುದಾಗಿ ಅಫ್ಘಾನಿಸ್ತಾನ ಗುಪ್ತಚರ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ.
ಅಫ್ಘಾನ್ ಹೃದಯಭಾಗದ ನಗರದಲ್ಲಿ ಕಳೆದ ವಾರ ಕಾರ್ ಬಾಂಬ್ ಮತ್ತು ಆತ್ಮಹತ್ಯಾ ದಾಳಿಯಲ್ಲಿ ಒಂಬತ್ತು ಮಂದಿ ಭಾರತೀಯರು ಸೇರಿದಂತೆ 16ಜನರು ಬಲಿಯಾಗಿದ್ದರು.
ಈ ದಾಳಿಯ ಹಿಂದೆ ಪಾಕಿಸ್ತಾನದ ತಾಲಿಬಾನ್ ಕೈವಾಡ ಇರುವ ಬಗ್ಗೆ ಪುರಾವೆ ಲಭಿಸಿರುವುದಾಗಿ ಅಫ್ಘಾನಿಸ್ತಾನ ನ್ಯಾಶನಲ್ ಡೈರೆಕ್ಟರೇಟ್ ಆಫ್ ಸೆಕ್ಯುರಿಟಿಯ ವಕ್ತಾರ ಸಯೀದ್ ಅನ್ಸಾರಿ ತಿಳಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಉಗ್ರರು ಉರ್ದು ಮಾತನಾಡುತ್ತಿರುವುದನ್ನು ಕೆಲವರು ಕೇಳಿಸಿಕೊಂಡಿರುವುದಾಗಿ ಅವರು ವಿವರಿಸಿದ್ದಾರೆ.
2008ರಲ್ಲಿ ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಈ ಸಂಘಟನೆಯೇ ಹೊಣೆಯಾಗಿದೆ ಎಂದು ದೂರಿದರು. ಶುಕ್ರವಾರ ದಾಳಿ ನಡೆದ ಅರ್ಧ ಗಂಟೆಯೊಳಗೆ ಅಫ್ಘಾನ್ ತಾಲಿಬಾನ್ ಹೊಣೆ ಹೊತ್ತುಕೊಂಡಿತ್ತು. ಆದರೆ ಈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಉಗ್ರರು ಭಾಗಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.