ನೇಪಾಳವನ್ನು ಮತ್ತೆ ಹಿಂದೂರಾಷ್ಟ್ರವನ್ನಾಗಿ ಮಾಡಬೇಕೆಂಬ ಹೋರಾಟಕ್ಕೆ ನೇಪಾಳದ ಪದಚ್ಯುತ ದೊರೆ ಜ್ಞಾನೇಂದ್ರ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಶುಪತಿನಾಥ ದೇವಾಲಯ ಸಮೀಪದ ಬಾಂಕಾಲಿ ಅರಣ್ಯ ಪ್ರದೇಶದಲ್ಲಿರುವ ದೇಶದ ಪ್ರಮುಖ ಸನ್ಯಾಸಿಯಾಗಿರುವ ಕಾಳಿ ಬಾಬಾನ ನೇತೃತ್ವದಲ್ಲಿ 64ರ ಹರೆಯದ ಜ್ಞಾನೇಂದ್ರ ಹಾಗೂ ಮಾಜಿ ರಾಣಿ ಕೋಮಲ್ ಅವರು, ನೇಪಾಳ ಮತ್ತೆ ಹಿಂದೂರಾಷ್ಟ್ರವಾಗಬೇಕೆಂಬ ಸಂಕಲ್ಪತೊಟ್ಟು ಮಹಾ ಯಜ್ಞ ನೆರವೇರಿಸಿದರು.
ಕಳೆದ ಮೂರು ವರ್ಷಗಳ ಹಿಂದೆ ನೇಪಾಳ ಸಂಸತ್ನಲ್ಲಿ ಜಾತ್ಯತೀತ ರಾಷ್ಟ್ರ ಎಂದು ಘೋಷಿಸಲಾಗಿತ್ತು. ಈ ಮೊದಲು ಹಿಂದೂ ರಾಷ್ಟ್ರವಾಗಿದ್ದ ನೇಪಾಳ, ಇದೀಗ ಜಾತ್ಯತೀತ ರಾಷ್ಟ್ರವಾಗಿದೆ. ಹಾಗಾಗಿ ನೇಪಾಳವನ್ನು ಮತ್ತೆ ಹಿಂದೂರಾಷ್ಟ್ರ ಎಂದು ಘೋಷಿಸಬೇಕೆಂದು ಪ್ರಚಾರಾಂದೋಲನ, ಪ್ರತಿಭಟನೆ ನಡೆಯುತ್ತಿದೆ.
ಹಿಂದೂರಾಷ್ಟ್ರವಾಗಬೇಕೆಂಬ ಒತ್ತಾಯಕ್ಕೆ ಮಾಜಿ ದೊರೆ ಸಾಥ್ ನೀಡಿದ್ದು, ಅದಕ್ಕಾಗಿ ಹಿಂದೂ ಸಂಪ್ರದಾಯದಂತೆ ಹೋಮ-ಹವನ ನಡೆಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಂತರ ದೇವಾಲಯಕ್ಕೆ ಆಗಮಿಸಿದ್ದ ಮಾಜಿ ದೊರೆಗೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಅಭಿನಂದನೆ ಸಲ್ಲಿಸಿ, ಹೂಮಾಲೆ ಹಾಕಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಪಾಳ ಮತ್ತೆ ಹಿಂದೂರಾಷ್ಟ್ರವಾಗಬೇಕು. ಅದು ಜನರ ಇಚ್ಛೆಯಾಗಿದೆ ಎಂದರು. ಆ ಕಾರಣಕ್ಕಾಗಿ ನೇಪಾಳ ಹಿಂದೂರಾಷ್ಟ್ರವಾಗಬೇಕೆಂಬ ಹೋರಾಟಕ್ಕೆ ತನ್ನ ಬೆಂಬಲ ಮುಂದುವರಿಸುವುದಾಗಿ ಹೇಳಿದರು.