ಭಾರತದ ವಾಣಿಜ್ಯ ನಗರಿ ಮುಂಬೈ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ ಸಂಚಿನ ಆರೋಪ ಎದುರಿಸುತ್ತಿರುವ ಕೆನಡಾ ಮೂಲದ ಪಾಕಿಸ್ತಾನ ಪ್ರಜೆ ಶಂಕಿತ ಉಗ್ರನಾಗಿರುವ ತಾಹವೂರ್ ರಾಣಾಗೆ ಅಮೆರಿಕದ ನ್ಯಾಯಾಲಯ ಬುಧವಾರ ಮತ್ತೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಗಂಭೀರ ಅಪರಾಧ ಎಸಗಿರುವ ಈತನಿಗೆ ಜಾಮೀನು ನೀಡಿದರೆ ಪರಾರಿಯಾಗುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಿರುವ ನ್ಯಾಯಾಲಯ, ಆತನಿಗೆ ಜಾಮೀನು ನೀಡಲು ನಿರಾಕರಿಸಿದೆ.
ರಾಣಾನ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಜಡ್ಜ್ ನಾನ್ ನೋಲಾನ್ಸ್ ಅವರು ತಿರಸ್ಕರಿಸಿರುವುದಾಗಿ ಅಮೆರಿಕದ ಉತ್ತರ ಜಿಲ್ಲೆಯ ಇಲ್ಲಿನಾಯ್ಸ್ ಜಿಲ್ಲಾ ಕೋರ್ಟ್ನ ನ್ಯಾಯಾಧೀಶರಾದ ಹ್ಯಾರ್ರಿ ಲೈನೆವೆಬೆರ್ ಅವರು, ಜಾಮೀನು ನಿರಾಕರಣೆ ಆದೇಶವನ್ನು ಓದಿ ಹೇಳಿದರು.
ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಾನನ್ನು ಕಳೆದ ವರ್ಷ ಎಫ್ಬಿಐ ಅಧಿಕಾರಿಗಳು ಬಂಧಿಸಿದ್ದರು. ಬಂಧನದ ನಂತರ ತನಗೆ ಜಾಮೀನು ನೀಡಬೇಕೆಂದು ಕೋರಿ ಈಗಾಗಲೇ ಹಲವು ಬಾರಿ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದ. ಆದರೆ ನ್ಯಾಯಾಲಯ ಪ್ರತಿಬಾರಿ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಲೇ ಬಂದಿದೆ.
ಪ್ರಮುಖ ಉಗ್ರಗಾಮಿ ಸಂಘಟನೆಯಾದ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾದ ನಿರ್ದೇಶನದ ಮೇರೆಗೆ ಭಾರತ ಮತ್ತು ಡೆನ್ಮಾರ್ಕ್ ಪತ್ರಿಕೆ ಮೇಲೆ ದಾಳಿ ನಡೆಸುವ ಸಂಚು ರೂಪಿಸಿರುವ ಆರೋಪದ ಮೇಲೆ ಹೆಡ್ಲಿ(49) ಮತ್ತು ರಾಣಾ(48)ನನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಎಫ್ಬಿಐ ಅಧಿಕಾರಿಗಳು ಬಂಧಿಸಿದ್ದರು.