'ನಾನು ಸಾಯಲು ಯಾವುದೇ ಕಾರಣಕ್ಕೂ ಹೆದರಲಾರೆ' ಎಂದು ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸೋಮವಾರ ಘೋಷಿಸಿದ್ದಾರೆ.
ಹೌದು...ನನಗೆ ಸಾವಿನ ಬಗ್ಗೆ ಹೆದರಿಕೆಯಿಲ್ಲ, ನನ್ನ ಸಾವಿಗಾಗಿಯೇ ನಾನು ಕಾಯುತ್ತಿದ್ದೇನೆ ಎಂದಿರುವ ಅವರು, ಅವಾನ್ ಇ ಸಾದರ್ನಲ್ಲಿ ಸಾವಿನ ಕುಣಿಕೆಯಿಂದ ಪಾರಾಗಿ ಬಂದಿದ್ದೇನೆ ಎಂದು ತಮ್ಮ ಅಧಿಕೃತ ನಿವಾಸದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೂಫಿಸಂ ಮತ್ತು ಶಾಂತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ತಿಳಿಸಿದ್ದಾರೆ.
ತಮ್ಮ ಸಾವಿನ ಬಗ್ಗೆ ಜರ್ದಾರಿ ಈ ರೀತಿ ಹೇಳಿರುವುದಾಗಿ ಆನ್ಲೈನ್ ನ್ಯೂಸ್ ಏಜೆನ್ಸಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಕೆಲವು ಜನರು ತಮ್ಮ ಲಾಭಕ್ಕಾಗಿ ಧಾರ್ಮಿಕತೆಯನ್ನೇ ಅಸ್ತ್ರವನ್ನಾಗಿ ಉಪಯೋಗಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಅದನ್ನು ನಾವು ನಮ್ಮದೇ ನೆಲೆಗಟ್ಟಿನಲ್ಲಿ ಎದುರಿಸುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.
ಈ ಸಮಾವೇಶವನ್ನು ಪಾಕಿಸ್ತಾನ್ ಅಕಾಡೆಮಿ ಆಫ್ ಲೆಟರ್ಸ್ ಆಯೋಜಿಸಿದ್ದು, ಇದರಲ್ಲಿ ಜಗತ್ತಿನ ಹಲವಾರು ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.
ನಾವು ಇಸ್ಲಾಂನ ಅನುಯಾಯಿಗಳು ಹೌದು, ಆದರೆ ಈ ವಿಪತ್ಕಾಲದಲ್ಲಿ ನಾವು ಸೂಫಿಸಂನ ಅಗತ್ಯತೆಯ ಬಗ್ಗೆ ಪ್ರಚಾರಾಂದೋಲನ ಮಾಡಬೇಕಾಗಿದೆ ಎಂದು ಜರ್ದಾರಿ ಈ ಸಂದರ್ಭದಲ್ಲಿ ಹೇಳಿದರು.