ವಾಣಿಜ್ಯ ಮುಂಬೈ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಮಲ್ ಕಸಬ್ ಹಾಗೂ ಫಾಹಿಮ್ ಅನ್ಸಾರಿಯನ್ನು ತಲೆಮರೆಸಿಕೊಂಡಿರುವ ಆರೋಪಿಗಳು ಎಂದು ಘೋಷಿಸಲು ಕೋರಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ಗೆ ಸರ್ಕಾರಿ ವಕೀಲರು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ.
ಭಯೋತ್ಪಾದನಾ ನಿಗ್ರಹ ಕೋರ್ಟ್ ನ್ಯಾಯಮೂರ್ತಿ ಮಲಿಕ್ ಮೊಹಮ್ಮದ್ ಅಕ್ರಮ್ ಅವಾನ್ ಅವರು ಭದ್ರತೆಯ ದೃಷ್ಟಿಯಿಂದ ಬಿಗಿ ಬಂದೋಬಸ್ತ್ನಲ್ಲಿ ಇಲ್ಲಿನ ಅಡಿಯಾಲ ಜೈಲಿನಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಕಸಬ್ ಮತ್ತು ಅನ್ಸಾರಿಯನ್ನು ತಲೆಮರೆಸಿಕೊಂಡಿರುವ ಅಪರಾಧಿಗಳೆಂದು ಘೋಷಿಸಿದರೆ, ಲಷ್ಕರ್ ಸಂಘಟನೆಯ ಜಾಕೀರ್ ಉರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಮಂದಿ ವಿರುದ್ಧ ತ್ವರಿತವಾಗಿ ವಿಚಾರಣೆ ನಡೆಸಬಹುದು ಎಂಬುದು ಸರ್ಕಾರಿ ಪರ ವಕೀಲರ ವಾದವಾಗಿತ್ತು. ಆದರೆ ಕಸಾಬ್ನನ್ನು ಪಾಕಿಸ್ತಾನದ ಇತರ ಏಳು ಮಂದಿ ಆರೋಪಿಗಳಿಂದ ಪ್ರತ್ಯೇಕಿಸಿ ವಿಚಾರಣೆ ನಡೆಸಬಾರದು ಎಂದು ಲಾಹೋರ್ ಹೈಕೋರ್ಟ್ ತೀರ್ಪು ನೀಡಿತ್ತು.
2008ರ ನವೆಂಬರ್ ತಿಂಗಳಿನಲ್ಲಿ ಮುಂಬೈ ಮಹಾನಗರಿ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖ್ವಿ, ಜರಾರ್ ಶಾ, ಅಬು ಅಲ್ ಕ್ವಾಮಾ, ಹಮಾದ್ ಅಮಿನ್ ಸಾದಿಕ್, ಶಾಹೀದ್ ಜಾಮಿಲ್ ರಿಯಾಜ್, ಜಾಮಿಲ್ ಅಹಮದ್ ಮತ್ತು ಯೂನಸ್ ಅಂಜುಮ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.