ಸರಿಯಾದ ದಾಖಲೆಗಳಿಲ್ಲದೆ ವಾಯುವ್ಯ ಗಡಿ ಭಾಗದ ಚಿತ್ರಾಲ್ ಪ್ರದೇಶ ಪ್ರವೇಶಿಸಿ ಪಾಕಿಸ್ತಾನಿ ಆಡಳಿತದಿಂದ ಸೆರೆಹಿಡಿಯಲ್ಪಟ್ಟ ಇಬ್ಬರು ಭಾರತೀಯರನ್ನು ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆ ಮಾಡಿರುವುದಾಗಿ ಪಾಕ್ ಹೇಳಿದೆ.
ಮುಂಬೈನ ಅಯಾಜ್ ಅಹ್ಮದ್ ಮತ್ತು ಗುಜರಾತ್ನ ನಸೀರ್ ಅಹ್ಮದ್ ಅವರನ್ನು ಕಳೆದ ವಾರ ಚಿತ್ರಾಲ್ ಮುಖ್ಯ ಬಜಾರ್ನ ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ವಿದೇಶೀಯರ ಅಕ್ರಮ ಪ್ರವೇಶ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದರು.
ಬಂಧಿತರು ಬನರ್ ಜಿಲ್ಲೆಗೆ ಭೇಟಿ ನೀಡುವ ವೀಸಾ ಮಾತ್ರ ಹೊಂದಿದ್ದು, ಚಿತ್ರಾಲ್ ಪ್ರಾಂತ್ಯವನ್ನು ಪ್ರವೇಶಿಸುವ ಯಾವುದೇ ಅನುಮತಿಯನ್ನು ಅವರು ಹೊಂದಿರಲಿಲ್ಲವಾಗಿತ್ತು. ಬನರ್ ಜಿಲ್ಲೆಯ ಮಹಮ್ಮದ್ ಇಮ್ರಾನ್ ಎಂಬ ಸ್ನೇಹಿತನ ಮನೆಯಲ್ಲಿ ತಂಗಿದ್ದ ಅವರಿಬ್ಬರು, ವಿವಾಹಕ್ಕಾಗಿ ಹೆಣ್ಣು ಹುಡುಕುವ ಕಾರ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಅವರಿಬ್ಬರನ್ನು ಬಿಡುಗಡೆಗೊಳಿಸಿ, ಬನರ್ ಜಿಲ್ಲೆಯ ವೀಸಾ ಹೊಂದಿರುವುದರಿಂದ ಅಲ್ಲಿಗೆ ವಾಪಸ್ ಕಳುಹಿಸುವಂತೆ ಆದೇಶಿಸಿದೆ.