ನೇಪಾಳದ ರಾಜಮನೆತನದಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದ ಸಂಚಿನ ಬಗ್ಗೆ ಇದೀಗ ಒಂಬತ್ತು ವರ್ಷಗಳ ಬಳಿಕ ಮತ್ತೊಮ್ಮೆ ಗುಲ್ಲೆದ್ದಿದ್ದು, ಈ ಕಗ್ಗೊಲೆಯ ಹಿಂದೆ ಭಾರತ ಮತ್ತು ಅಮೆರಿಕದ ಕೈವಾಡ ಇರುವುದಾಗಿ ನೇಪಾಳದ ಹಿರಿಯ ಮಾಜಿ ಸಚಿವರೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.
ಅತ್ಯಂತ ಬಿಗಿ ಭದ್ರತೆ ಹೊಂದಿದ್ದ ನೇಪಾಳದ ಅರಮನೆಯಲ್ಲಿ ದೊರೆ ಬೀರೇಂದ್ರ ಹಾಗೂ ಒಂಬತ್ತು ಅಧಿಕ ಕುಟುಂಬದ ಸದಸ್ಯರು ಗುಂಡಿನ ದಾಳಿಯಲ್ಲಿ ಸಾಮೂಹಿಕವಾಗಿ ಬಲಿಯಾಗಿದ್ದರು. ಆದರೆ ಈ ಹತ್ಯಾಕಾಂಡದ ಹಿಂದೆ ಎರಡು ವಿದೇಶಿ ಸರ್ಕಾರಗಳ ಕೈವಾಡ ಇರುವುದಾಗಿ ನೇಪಾಳದ ಮಾಜಿ ವಿದೇಶಾಂಗ ಸಚಿವ ಚಾಕ್ರಾ ಪ್ರಸಾದ್ ಬಾಸ್ಟೋಲಾ ದೂರಿದ್ದಾರೆ.
ಬಾಸ್ಟೋಲಾ ಅವರು ಭಾರತದಲ್ಲಿ ನೇಪಾಳದ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಕಳೆದ ತಿಂಗಳು ಸಾವನ್ನಪ್ಪಿದ್ದ ನೇಪಾಳದ ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೋಯಿರಾಲಾಗೂ ಕೂಡ ಆಪ್ತರಾಗಿದ್ದರು.
ನೇಪಾಳ ದೊರೆ ಮತ್ತು ಕುಟುಂಬದ ಹತ್ಯಾಕಾಂಡದ ಹಿಂದೆ ಭಾರತ ಮತ್ತು ಅಮೆರಿಕದ ಕೈವಾಡ ಇರುವ ಬಗ್ಗೆ ಬಾಸ್ಟೋಲಾ ಶಂಕೆ ವ್ಯಕ್ತಪಡಿಸಿದ್ದಾರೆಂದು ನೇಪಾಳದ ನಾಗರಿಕ ದಿನಪತ್ರಿಕೆ ತನ್ನ ವಿಶೇಷ ಸಂಚಿಕೆಯ ವರದಿಯಲ್ಲಿ ತಿಳಿಸಿದೆ.
ಈ ಸಾಮೂಹಿಕ ಹತ್ಯಾಕಾಂಡದ ಸಂಚನ್ನು ಭಾರತ ಮತ್ತು ಅಮೆರಿಕ ಜಂಟಿಯಾಗಿ ರೂಪಿಸರಬೇಕೆಂಬುದಾಗಿ ಅವರು ಶಂಕಿಸಿದ್ದಾರೆ. ಆದರೆ ದೊರೆ ಬೀರೇಂದ್ರ ಮತ್ತು ಕುಟುಂಬವನ್ನು ಯುವರಾಜ ದೀಪೇಂದ್ರ ಮಾದಕ ದ್ರವ್ಯ ಸೇವಿಸಿದ ಮತ್ತಿನಲ್ಲಿ ಗುಂಡಿನ ಮಳೆಗೆರೆದ ಪರಿಣಾಮ ಅವರೆಲ್ಲಾ ಸಾವನ್ನಪ್ಪಿದ್ದು, ನಂತರ ತನಗೆ ತಾನು ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ತನಿಖಾ ವರದಿ ಸಂಸ್ಥೆ ತಿಳಿಸಿತ್ತು. ಅವೆಲ್ಲಾ ತನಿಖಾ ವರದಿಯ ನಂತರವೂ ಕೂಡ ದೊರೆ ಮತ್ತು ಕುಟುಂಬದ ಹತ್ಯಾಕಾಂಡದ ಬಗ್ಗೆ ಇಂತಹ ಶಂಕೆಗಳು ಕೇಳಿಬರುತ್ತಲೇ ಇದೆ.