ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿರಬೇಕು ಎಂದು ಬಯಸುವ ಹಿನ್ನೆಲೆಯಲ್ಲಿ, ರಾಷ್ಟ್ರಾಧ್ಯಕ್ಷ ಜರ್ದಾರಿಯವರ ಅಧಿಕಾರವನ್ನು ಕಡಿತಗೊಳಿಸುವ ಪ್ರಕ್ರಿಯೆಯಲ್ಲಿ ಸೇನೆ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಪ್ರಧಾನಿ ಗಿಲಾನಿ ಹೇಳಿದ್ದಾರೆ.
ಕಳೆದ 1985ರಿಂದ 2002ರವರೆಗೆ ಸೇನೆ ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಿತ್ತು. ಆದರೆ ಇದೀಗ ಸೇನೆ, ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸ್ಥಿರತೆಯನ್ನು ಜಾರಿಗೆ ತರಲು ಬೆಂಬಲ ಸೂಚಿಸಿದೆ ಎಂದು ಆನ್ಲೈನ್ ಸುದ್ದಿಸಂಸ್ಥೆಗೆ ಪ್ರಧಾನಿ ಯುಸೂಫ್ ರಝಾ ಗಿಲಾನಿ ತಿಳಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ಪರಿಣಮಿಸಿದ್ದ ಅನಧಿಕೃತ ಮಸೂದೆ ಮಂಡನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಾನೂನಿನಲ್ಲಿ ಮತ್ತಷ್ಟು ತಿದ್ದುಪಡಿಗಳನ್ನು ತರುವುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ ರಾಜಕೀಯ ಸ್ಥಿರತೆಯಿಲ್ಲದೆ ಆರ್ಥಿಕ ಸ್ಥಿರತೆಯನ್ನು ತರಲು ಸಾಧ್ಯವಾಗುವುದಿಲ್ಲ. ಸಂವಿಧಾನದಡಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಿದಾಗ ಘರ್ಷಣೆ ಸಂಭವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಾಧ್ಯಕ್ಷರಿಗೆ, ಸಂಸತ್ತು ಅಮಾನತು ಹಾಗೂ ಸೇನಾಪಡೆಗಳ ಮುಖ್ಯಸ್ಥರ ನೇಮಕ ಸೇರಿದಂತೆ ಇತರ ವಿಶೇಷ ಅಧಿಕಾರಗಳನ್ನು ರದ್ದುಪಡಿಸಲಾಗಿದೆ.17 ನೇ ಸಂವಿಧಾನ ತಿದ್ದುಪಡಿಯಲ್ಲಿ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಗಿಲಾನಿ ತಿಳಿಸಿದ್ದಾರೆ.