ಭಾರತ ಸರಕಾರದ ಏಜೆನ್ಸಿ ಜತೆಗಿನ ಒಪ್ಪಂದವನ್ನು ನೇಪಾಳ ಸರಕಾರ ರದ್ದುಪಡಿಸಿದ ವಾರದ ನಂತರ 'ಇದೊಂದು ಪ್ರಮಾದ' ಎಂದು ದೇಶದ ಉಪ ಪ್ರಧಾನಿ ಸುಜಾತಾ ಕೊಯಿರಾಲಾ ಬಣ್ಣಿಸಿದ್ದು, ಈ ವಿಚಾರದಲ್ಲಿ ಮೈತ್ರಿ ಸರಕಾರವು ಭಿನ್ನಮತ ಹೊಂದಿದೆ ಎಂಬುದನ್ನು ಹೊರಗೆಡವಿದೆ.
ಸುಪ್ರೀಂ ಕೋರ್ಟ್ ತೀರ್ಪು ಬರುವುದಕ್ಕೂ ಕಾಯರೆ ಒಪ್ಪಂದವನ್ನು ರದ್ದುಪಡಿಸುವ ಮೂಲಕ ನಾವು ತಪ್ಪೆಸಗಿದ್ದೇವೆ ಎಂದಿರುವ ಉಪಪ್ರಧಾನಿ ಹಾಗೂ ದೇಶದ ವಿದೇಶಾಂಗ ಸಚಿವೆ ಕೊಯಿರಾಲಾ, ಈ ಸಂಬಂಧ ನವದೆಹಲಿಗೆ ವಿಷಾದ ವ್ಯಕ್ತಪಡಿಸಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಕಂಪ್ಯೂಟರೀಕೃತ ಪಾಸ್ಪೋರ್ಟ್ಗಳನ್ನು ತಯಾರಿಸಿ ಕೊಡುವುದಕ್ಕಾಗಿ ಭಾರತ ಸರಕಾರದ ಏಜೆನ್ಸಿಯೊಂದರ ಜತೆ ನೇಪಾಳ ಸರಕಾರವು ಒಪ್ಪಂದವೊಂದನ್ನು ಮಾಡಿಕೊಂಡಿತ್ತು. ಆದರೆ ವಿರೋಧ ಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದು, ಒಪ್ಪಂದವನ್ನು ನೇಪಾಳವು ಇತ್ತೀಚೆಗಷ್ಟೇ ರದ್ದುಪಡಿಸಿತ್ತು.
ಕೊಯಿರಾಲಾ ನಿವಾಸಕ್ಕೆ ಬಂದಿದ್ದ ನೇಪಾಳ ವರದಿಗಾರರ ಸಂಘದ ನಿಯೋಗದ ಜತೆ ಮಾತನಾಡುತ್ತಿದ್ದ ಅವರು, ಪಾಸ್ಪೋರ್ಟ್ ವಿಚಾರದಲ್ಲಿ ಏನು ನಡೆದಿದೆಯೋ, ಅದಕ್ಕಾಗಿ ನಾವು ಭಾರತಕ್ಕೆ ಮರುಕ ವ್ಯಕ್ತಪಡಿಸಬೇಕಾಗಿದೆ ಎಂದು ತನ್ನ ಸ್ಪಷ್ಟ ಅಸಮಾಧಾನವನ್ನು ತೋಡಿಕೊಂಡರು.
ಭಾರತದ ಕಂಪನಿಯೊಂದಕ್ಕೆ ಒಪ್ಪಂದವನ್ನು ನೀಡುವ ಬಗ್ಗೆ ಸಂಪುಟವು ನಿರ್ಧಾರ ಕೈಗೊಂಡಿತ್ತು. ಅದೇ ಸಂಪುಟವು ಇದೀಗ ತನ್ನ ನಿರ್ಧಾರವನ್ನು ಬದಲಾಯಿಸಿರುವುದು ಅಸಂಬಂದ್ಧ ಎಂದಿರುವ ಆಕೆ, ನೇಪಾಳ ಸರಕಾರವು ಭಾರತಕ್ಕೆ ವಿಷಾದ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಒಪ್ಪಂದ ರದ್ದು ಮಾಡಿರುವ ಸಂಬಂಧ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈಗಾಗಲೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.