ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮತ್ತು ಭಾರತ ಪ್ರಧಾನಿ ಮನಮೋಹನ್ ಸಿಂಗ್ ನಡುವೆ ಭೂತಾನ್ ಸಾರ್ಕ್ ಶೃಂಗಶಭೆಯ ಸಂದರ್ಭದಲ್ಲಿ ಮಾತುಕತೆ ನಡೆಯಬಹುದು ಎಂದು ಪಾಕ್ ಹೇಳಿಕೊಂಡಿದೆ. ಆದರೆ ನವದೆಹಲಿ ಇಂತಹ ಸಾಧ್ಯತೆಗಳನ್ನು ತಳ್ಳಿ ಹಾಕಿದೆ.
ಭೂತಾನ್ನ ತಿಂಫೂವಿನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಇತರ ದೇಶಗಳ ಮುಖ್ಯಸ್ಥರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿಯವರು ಇತರ ರಾಷ್ಟ್ರಗಳ ಮುಖ್ಯಸ್ಥರ ಜತೆ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಯನ್ನು ತಳ್ಳಿ ಹಾಕುತ್ತಿಲ್ಲ. ಈ ಅವಕಾಶವನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಈ ಬಗ್ಗೆ 'ದಿ ನ್ಯೂಸ್' ಪತ್ರಿಕೆ ಶನಿವಾರ ವರದಿ ಮಾಡಿದೆ.
ಆದರೆ ಇದನ್ನು ಭಾರತ ತಳ್ಳಿ ಹಾಕಿದೆ. ಇದುವರೆಗೂ ಪಾಕಿಸ್ತಾನದಿಂದ ಅಂತಹ ಯಾವುದೇ ಮನವಿಗಳು ನಮಗೆ ಬಂದಿಲ್ಲ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ತಿಳಿಸಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಭಾರತದ ವಿದೇಶಾಂಗ ಕಾರ್ಯದರ್ಶಿಯವರ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದೆ. ನ್ಯೂಯಾರ್ಕ್ನಲ್ಲಿ ನಡೆದಿದ್ದ ಮೊದಲ ಭೇಟಿಯ ಸಂದರ್ಭದಲ್ಲಿ ಮಾಡಿದ್ದ ಪ್ರಸ್ತಾವನೆಯನ್ನು ಅವರು ನೆನಪಿಸಿಕೊಳ್ಳಲಿ. ನಂತರ ದೆಹಲಿಯಲ್ಲಿ ಫೆಬ್ರವರಿ 25ರಂದು ನಡೆದಿದ್ದ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆಯನ್ನೂ ಗಮನಕ್ಕೆ ತೆಗೆದುಕೊಳ್ಳಲಿ. ನಾವು ಉಭಯ ದೇಶಗಳ ನಡುವೆ ಅರ್ಥಪೂರ್ಣ ಮಾತುಕತೆಗಾಗಿ ಪ್ರಸ್ತಾಪ ಮುಂದಿಟ್ಟಿದ್ದೆವು. ಇದರಲ್ಲಿ ಸಾರ್ಕ್ ಸಮ್ಮೇಳನದಲ್ಲಿ ಇಬ್ಬರೂ ಮುಖಂಡರು ಮುಖಾಮುಖಿಯಾಗುವುದೂ ಸೇರಿದೆ ಎಂದಿದೆ.