ಕಳೆದೆರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪಾಕಿಸ್ತಾನ ಮತ್ತು ಭಾರತಗಳ ನಡುವಿನ ಮಾತುಕತೆ ಪುನರಾರಂಭಕ್ಕೆ ಒಪ್ಪಿಗೆ ಸೂಚಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ತನ್ನ ಮೂರು ದಿನಗಳ ಭೂತಾನ್ ಪ್ರವಾಸವನ್ನು ಅಂತ್ಯಗೊಳಿಸಿ ಶುಕ್ರವಾರ ತವರಿಗೆ ವಾಪಸಾಗಿದ್ದಾರೆ.
ಭೂತಾನ್ ರಾಜಧಾನಿ ತಿಂಫುವಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಪಾರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಡಾ. ಸಿಂಗ್ ಅವರು ಇಂದು ಬೆಳಿಗ್ಗೆ ನವದೆಹಲಿಗೆ ಹೋಗಿದ್ದಾರೆ.
ಆರ್ಥಿಕ ಏಕೀಕರಣದಲ್ಲಿ ಹೊಸ ಗುರಿಯನ್ನು ಹೊಂದುವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕುವ ಕುರಿತು ಭರವಸೆ ವ್ಯಕ್ತಪಡಿಸಿದ 16ನೇ ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಲು ಸಿಂಗ್ ಇಲ್ಲಿಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರನ್ನು ಪ್ರಧಾನಿ ಸಿಂಗ್ ಭೇಟಿಯಾಗಿದ್ದು, ಉಭಯ ದೇಶಗಳ ವಿಶ್ವಾಸ ಮತ್ತು ನಂಬಿಕೆಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಮುರಿದು ಬಿದ್ದಿರುವ ಸಮಗ್ರ ಮಾತುಕತೆಯನ್ನು ಪುನರಾರಂಭಿಸುವ ನಿರ್ಧಾರಕ್ಕೆ ಬರಲಾಗಿದೆ.
ಪ್ರಧಾನಿಯವರು ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಾಯಕರನ್ನೂ ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಶುಕ್ರವಾರ ಭೂತಾನ್ ಪ್ರಧಾನಿ ಜಿಗ್ಮಿ ತಿನ್ಲೇಯವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ. ಈ ಸಂದರ್ಭದಲ್ಲಿ 1710 ಮೆಗಾ ವ್ಯಾಟ್ ಸಾಮರ್ಥ್ಯದ ಪುನಾತ್ಸಂಗಚ್ಚು-II ಮತ್ತು ಮಂಗ್ದೆಚ್ಚು ಹೈಡ್ರೋ ಎಲೆಕ್ಟ್ರಿಕ್ ಜಂಟಿ ಯೋಜನೆಯ ಜಾರಿ ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿವೆ ಎಂದು ವರದಿಗಳು ಹೇಳಿವೆ.
ಈ ಒಪ್ಪಂದಗಳಿಗೆ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ಭೂತಾನ್ ವಿದೇಶಾಂಗ ಸಚಿವ ಖಾಂಡು ವಾಂಗ್ಚುಕ್ರವರು ಉಭಯ ದೇಶಗಳ ಪ್ರಧಾನ ಮಂತ್ರಿಗಳ ಉಪಸ್ಥಿತಿಯಲ್ಲಿ ಸಹಿ ಹಾಕಿದರು.