ಭುಟ್ಟೋ ಹತ್ಯೆ - ವಿಶ್ವಸಂಸ್ಥೆ ಆಯೋಗ ವರದಿ ಇನ್ನೂ ಅಪೂರ್ಣ: ಪಾಕ್
ಲಾಹೋರ್, ಸೋಮವಾರ, 3 ಮೇ 2010( 18:54 IST )
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಆಯೋಗದ ವರದಿ ಈವರೆಗೂ ಅಪೂರ್ಣವಾಗಿಯೇ ಇದೆ ಎಂದು ರಕ್ಷಣಾ ಸಚಿವ ಅಹ್ಮದ್ ಮುಖ್ತಾರ್ ತಿಳಿಸಿದ್ದಾರೆ.
ಇಲ್ಲಿನ ಗುಜ್ರಾತ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ನೇತೃತ್ವದಲ್ಲಿ ಸತ್ಯ ಸಂಶೋಧನಾ ಆಯೋಗವನ್ನು ರಚಿಸಲಾಗಿದ್ದು, ಇನ್ನು ಎಂಟು ದಿನಗಳಲ್ಲಿಯೇ ವರದಿಯನ್ನು ಅಂತಿಮಗೊಳಿಸಲಿದ್ದಾರೆ ಎಂದರು.
ಆ ನಿಟ್ಟಿನಲ್ಲಿ ವಿಶ್ವಸಂಸ್ಥೆ ಆಯೋಗದ ವರದಿ ಭುಟ್ಟೋ ಹತ್ಯೆ ಕುರಿತಂತೆ ಕೆಲವು ಮಹತ್ವದ ಸತ್ಯವನ್ನು ಹೊರಗೆಡವಲಿದ್ದು, ನಿಜವಾದ ಅಪರಾಧಿಯನ್ನು ಹಿಡಿಯಲು ಇದು ಸಹಾಯಕವಾಗಲಿದೆ ಎಂದು ಮುಖ್ತಾರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆಂದು ಡೈಲಿ ಟೈಮ್ಸ್ ವರದಿ ತಿಳಿಸಿದೆ.
ಏತನ್ಮಧ್ಯೆ, ಭುಟ್ಟೋ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ವಿಶ್ವಸಂಸ್ಥೆ ವರದಿ ಅಸ್ಪಷ್ಟವಾಗಿರುವುದಾಗಿ ಜಾಮಿಯತ್ ಉಲೇಮಾ ಇ ಇಸ್ಲಾಮ್ನ ವರಿಷ್ಠ ಮೌಲಾನಾ ಫಾಜಲ್ ಉರ್ ರೆಹಮಾನ್ ದೂರಿದ್ದಾರೆ.