ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಭೋಪಾಲ್ ಜನರು ತಮಗೆ ತೃಪ್ತಿಯಾಗುವ ನ್ಯಾಯ ಸಿಕ್ಕಿಲ್ಲ ಎಂದು ಗೋಗರೆಯುತ್ತಿರುವ ನಡುವೆಯೇ, ಅಮೆರಿಕದಲ್ಲಿ ಭಾರತೀಯ ಮೂಲದ 12ರ ಹರೆಯದ ಪೋರನೊಬ್ಬ ದುರಂತದ ಪ್ರಮುಖ ರೂವಾರಿಯಾಗಿರುವ ವಾರ್ರೆನ್ ಆಂಡರ್ಸನ್ಗೆ ಸಮನ್ಸ್ ನೀಡಲು ಯತ್ನಿಸಿರುವ ಕುತೂಹಲಕಾರಿ ಘಟನೆ ನಡೆದಿದೆ.
ಸಾವಿರಾರು ಮುಗ್ದ ಜನರ ಹತ್ಯೆಗೆ ಕಾರಣನಾಗಿರುವ ವಾರ್ರೆನ್ ಭಾರತದ ನ್ಯಾಯಾಲಯಕ್ಕೆ ಹಾಜರಾಗುವಂತೆ ನಾವು ಈ ಮೂಲಕ ಸಮನ್ಸ್ ಜಾರಿ ಮಾಡುತ್ತಿರುವುದಾಗಿ 12ರ ಪೋರ ಆಕಾಶ್ ವಿಶ್ವನಾಥ್ ತಿಳಿಸಿದ್ದಾನೆ.
ಭೋಪಾಲ್ ಅನಿಲ ದುರಂತಕ್ಕೆ ಕಾರಣನಾಗಿರುವ ವಾರ್ರೆನ್ಗೆ ಸಮನ್ಸ್ ನೀಡಲು ಇಲ್ಲಿನ ಯೂನಿಯನ್ ಕಾರ್ಬೈಡ್ ಕಂಪನಿಯ ಕಾನೂನು ಕಚೇರಿಗೆ ಆಕಾಶ್ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ. ಇವೆಲ್ಲದರ ನಡುವೆ ವಾರ್ರೆನ್ ಹಸ್ತಾಂತರಕ್ಕೆ ಒಂದೆಡೆ ಅಮೆರಿಕ ಇಬ್ಬಗೆ ನೀತಿ ಅನುಸರಿಸುತ್ತಿದ್ದರೆ, ಮತ್ತೊಂದೆಡೆ ಭಾರತ ಮುಗಿದ ಅಧ್ಯಾಯ ಎಂಬಂತೆ ಆಡಳಿತಾರೂಢ ಯುಪಿಎ ಸರ್ಕಾರ ಕೈಚೆಲ್ಲಿ ಕುಳಿತಿರುವಾಗ ಈ 12ರ ಪೋರನ ದಿಟ್ಟತನ ಏನು ಮಾಡಲು ಸಾಧ್ಯ ಎಂಬುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆಯಾಗಿದೆ.
ಮೆಹ್ತಾ ತನ್ನ 15ರ ಹರೆಯದ ಅಣ್ಣ ಗೌತಮ್ ಜೊತೆ ಇಲ್ಲಿನ ಯೂನಿಯನ್ ಕಾರ್ಬೈಡ್ ಕಾನೂನು ಕಚೇರಿಗೆ ಆಗಮಿಸಿದ್ದು, ವಾರೆನ್ ವಿರುದ್ಧದ ಧ್ವನಿ ಎತ್ತಿರುವ ಈ ಪುಟ್ಟ ಪೋರ, ಕೂಡಲೇ ಭಾರತದ ನ್ಯಾಯಾಲಯಕ್ಕೆ ಕೆಲ್ಲಿ, ಡ್ರಯೆ ಮತ್ತು ವಾರ್ರೆನ್ ಹಾಜರಾಗುವಂತೆ ಸೂಚಿಸುವಂತೆ ಕಾನೂನು ಕಚೇರಿಗೆ ಕಳುಹಿಸಿರುವ ಮನವಿಯಲ್ಲಿ ತಿಳಿಸಿದ್ದಾನೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಯೂನಿಯನ್ ಕಾರ್ಬೈಡ್ ಕಾನೂನು ಕಚೇರಿ ಕಟ್ಟಡದ ಮಾಲೀಕ, ಕಚೇರಿಯಲ್ಲಿ ಯಾರೊಬ್ಬರೂ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಈ ಸಮನ್ಸ್ ಅನ್ನು ಪೋಸ್ಟ್ ಮೂಲಕ ಕಳುಹಿಸುವಂತೆ ಆಕಾಶ್ಗೆ ಸಲಹೆ ನೀಡಿದ್ದಾರಂತೆ.
'ಭಾರತದ ಭೋಪಾಲ್ನಲ್ಲಿ ಸಂಭವಿಸಿರುವ ಅನಿಲ ದುರಂತದ ನಂತರ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಓ ವಾರ್ರೆನ್ ನ್ಯಾಯದ ಕಣ್ಣಿಗೆ ಮಣ್ಣೆರಚಿ ತಲೆತಪ್ಪಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಎಂದು ಇಂಟರ್ನ್ಯಾಷನಲ್ ಕ್ಯಾಂಪೇನ್ ಫಾರ್ ಜಸ್ಟೀಸ್ ಇನ್ ಭೋಪಾಲ್(ಐಸಿಜೆಬಿ)ಯ ಆಡ್ರಿನ್ನೆ ರಾಫ್ ಕ್ರೌವಿನ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಾವಿರಾರು ಜನರ ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ರಕ್ಷಿಸುವುದು ಸರಿಯಲ್ಲ,ಹಾಗಾಗಿ ಅಮೆರಿಕ ಆತನನ್ನು ಕೂಡಲೇ ಭಾರತಕ್ಕೆ ಹಸ್ತಾಂತರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಅಲ್ಲದೇ ಈ ಸಂದರ್ಭದಲ್ಲಿ ಐಸಿಜೆಬಿ ಮತ್ತು ಕಿಡ್ಸ್ ಫಾರ್ ಎ ಬೆಟರ್ ಬೇಸ್ಡ್ ಇನ್ ನ್ಯೂಯಾರ್ಕ್ ಸಂಸ್ಥೆ ಭೋಪಾಲ್ ಅನಿಲ ದುರಂತದ ಪ್ರಮುಖ ರೂವಾರಿ ಆಂಡರ್ಸನ್ ವಿರುದ್ಧ ಪ್ರತಿಭಟನೆ ಕೂಡ ನಡೆಸಿದೆ. ವಾರೆನ್ ಕೂಡಲೇ ಭಾರತದ ಕೋರ್ಟ್ಗೆ ಹಾಜರಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ವಾರೆನ್ ವಿರುದ್ಧ ಆಕಾಶ್ ಮತ್ತು ಪ್ರತಿಭಟನಾಕರರು ವಾಗ್ದಾಳಿ ನಡೆಸಿ, ಪ್ರತಿಭಟನೆ ಮುಕ್ತಾಯಗೊಳಿಸುವ ಹೊತ್ತಿಗೆ ಪೊಲೀಸ್ ಅಧಿಕಾರಿಗಳ ದಂಡು ದುಪ್ಪಟ್ಟಾಗಿತ್ತಂತೆ.
ಸಾವಿರಾರು ಜನರ ಸಾವಿಗೆ ಕಾರಣನಾಗಿರುವ ವಾರ್ರೆನ್ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಬೇಕು, ಹಾಗೂ ಘಟನೆಯ ನೈತಿಕ ಹೊಣೆ ಹೊತ್ತು ಭಾರತದ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆಕಾಶ್ ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾನೆ.
ಸಿಂಗ್ ವಿರುದ್ಧವೂ ಪ್ರತಿಭಟನೆ:ಈ ಪ್ರತಿಭಟನೆಯ ನಡುವೆಯೇ ವಾಷಿಂಗ್ಟನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಮತ್ತೊಂದು ಪ್ರತಿಭಟನೆ ನಡೆದಿದ್ದು, ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಸಮರ್ಪಕವಾದ ಕರ್ತವ್ಯ ನಿರ್ವಹಿಸಿಲ್ಲ, ಹಾಗಾಗಿ ನಾವೇ ವಾರೆನ್ಗೆ ಸಮನ್ಸ್ ನೀಡಲು ಮುಂದಾಗಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.