ಮುಂಬೈ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯೀ ಸರಕಾರವು ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾದ ಅಂಗ ಸಂಸ್ಥೆ ಜಮಾತ್ ಉದ್ ದಾವಾಕ್ಕೆ 8.27 ಕೋಟಿ ರೂಪಾಯಿಗಳ ಧನ ಸಹಾಯ ನೀಡಿರುವುದು ಬೆಳಕಿಗೆ ಬಂದಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಪಿಎಂಎಲ್-ಎನ್ ನೇತೃತ್ವದ ಪ್ರಾಂತ್ಯೀಯ ಸರಕಾರವು ಲಾಹೋರ್ ಸಮೀಪದ ಮುರಿಡ್ಕೆಯಲ್ಲಿನ ಜಮಾತ್ ಉದ್ ದಾವಾದ ಪ್ರಧಾನ ಕಚೇರಿ 'ಮರ್ಕಜ್-ಇ-ತಯ್ಯಬಾ'ಕ್ಕೆ 7.9 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲು ಪಂಜಾಬ್ ವಿಧಾನಸಭೆಯಲ್ಲಿ ಉಪ ಬಜೆಟ್ ಮಂಡಿಸಿತ್ತು ಎನ್ನುವುದು ದಾಖಲೆಗಳಿಂದ ತಿಳಿದು ಬಂದಿದೆ.
ಪಂಜಾಬ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಮಾತ್ ಉದ್ ದಾವಾದಿಂದ ನಡೆಸಲ್ಪಡುವ ಶಾಲೆಗಳಿಗೆ 30 ಲಕ್ಷ ರೂಪಾಯಿಗಳನ್ನು ಕೂಡ ನೀಡಲಾಗಿತ್ತು.
'ಸಿಪಾಹ್ ಇ ಸಹಾಬಾ'ದಂತಹ ನಿಷೇಧಿತ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಪಂಜಾಬ್ ಪ್ರಾಂತೀಯ ಸರಕಾರದ ಕಾನೂನು ಸಚಿವ ರಾಣಾ ಸನಾವುಲ್ಲಾಹ್ ಅವರು ಜಮಾತ್ ಉದ್ ದಾವಾಕ್ಕೆ ಹಣ ನೀಡಿರುವುದನ್ನು ಇದೀಗ ಒಪ್ಪಿಕೊಳ್ಳುವುದರೊಂದಿಗೆ ಸಹಾಯ ಮಾಡಿರುವುದು ಖಚಿತವಾಗಿದೆ.
2008ರ ಮುಂಬೈ ದಾಳಿ ಹಿನ್ನೆಲೆಯಲ್ಲಿ ಜಮಾತ್ ಉದ್ ದಾವಾ ನಿಷೇಧಕ್ಕೊಳಗಾದ ನಂತರ ಪಂಜಾಬ್ ಸರಕಾರವು ಈ ಸಂಘಟನೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದು, ಅದರ ಸಂಸ್ಥೆಗಳಿಗೆ ಹಣ ನೀಡಿರುವುದನ್ನು ಅವರು ಮಂಗಳವಾರ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಾ ಖಚಿತಪಡಿಸಿದ್ದಾರೆ.
ಅದನ್ನು ಸಮರ್ಥಿಸಿಕೊಂಡಿರುವ ಸನಾವುಲ್ಲಾಹ್, ಜಮಾತ್ ಉದ್ ದಾವಾದಿಂದ ನಡೆಸಲ್ಪಡುತ್ತಿರುವ ಶಾಲೆಗಳು ಸೇರಿದಂತೆ ಕಲ್ಯಾಣ ಸೇವೆಗಳು ಯಥಾ ಪ್ರಕಾರ ಮುಂದುವರಿಯಬೇಕೆನ್ನುವ ಇರಾದೆಯೊಂದಿಗೆ ಆರ್ಥಿಕ ಸಹಕಾರ ನೀಡಲಾಗಿದೆ ಎಂದಿದ್ದಾರೆ.
ಅದೇ ಹೊತ್ತಿಗೆ ಇದನ್ನು ನಿರಾಕರಿಸಿರುವ ಜಮಾತ್ ಉದ್ ದಾವಾ, ಪಂಜಾಬ್ ಪ್ರಾಂತೀಯ ಸರಕಾರದಿಂದ ತಾನು ಆರ್ಥಿಕ ಸಹಕಾರ ಪಡೆದುಕೊಂಡಿಲ್ಲ ಎಂದು ಹೇಳಿದೆ.
ನಮ್ಮದು ಸಮಾಜ ಕಲ್ಯಾಣ ಸಂಘಟನೆಯಾಗಿದ್ದು, ನಾವು ಶೈಕ್ಷಣಿಕ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಸಲುವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತೇವೆ. ಸಚಿವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಸಂಘಟನೆಯ ವಕ್ತಾರ ಯಾಹ್ಯಾ ಮುಜಾಹಿದ್ ಟೀಕಿಸಿದ್ದಾನೆ.