ಇತ್ತೀಚೆಗೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರು ಯಾರೂ ನಕಲಿ ಪಾಸ್ಫೋರ್ಟ್ ಹೊಂದಿರಲಿಲ್ಲ ಎಂದು ಇಲ್ಲಿನ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಟಿಕೆಟ್ಗಳಲ್ಲಿ ಕೆಲವು ಪ್ರಯಾಣಿಕರ ಪಾಸ್ಫೋರ್ಟ್ ಸಂಖ್ಯೆಗಳನ್ನು ತಪ್ಪಾಗಿ ಮುದ್ರಿಸಿದ ಕಾರಣ ಕೆಲವು ಪ್ರಯಾಣಿಕರು ನಕಲಿ ಪಾಸ್ಫೋರ್ಟ್ ಹೊಂದಿದ್ದರು ಎಂಬ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು ಎಂದು ವಿದೇಶಿ ವ್ಯವಹಾರ ಇಲಾಖೆಯ ಅಧಿಕಾರಿ ಮೇಜರ್ ಜನರಲ್ ಮೊಹಮ್ಮದ್ ಅಹ್ಮದ್ ತಿಳಿಸಿದ್ದಾರೆ.
53ವರ್ಷದ ಕೆ.ವಿ.ಅಬ್ದುಲ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದು, ಅವರು ಹೊಂದಿದ ಪಾಸ್ ಫೋರ್ಟ್ ಅಸಲಿಯಾಗಿತ್ತು ಎಂದು ಗಲ್ಫ್ ನ್ಯೂಸ್ ತನ್ನ ವರದಿಯೊಂದರಲ್ಲಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ಉಲ್ಲೇಖಿಸಿ ಸ್ಪಷ್ಟಪಡಿಸಿದೆ.
ಮೇ 21ರಂದು ಅಬ್ದುಲ್ ದುಬೈಯನ್ನು ಬಿಟ್ಟಿದ್ದರು. ಮಾರನೇ ದಿನ ದುರಂತದಲ್ಲಿ ಸಾವನ್ನಪ್ಪಿದ್ದರು. ಅವರು ತಮ್ಮ ಪ್ರಯಾಣಕ್ಕಾಗಿ ತಮ್ಮದೇ ಪಾಸ್ ಫೋರ್ಟ್ ಬಳಸಿದ್ದರು. ವಿಮಾನ ಏರುವ ಮುನ್ನ ಅವಶ್ಯವಿರುವ ಎಲ್ಲಾ ಕಡೆಗಳಲ್ಲೂ ಸೂಕ್ತ ತನಿಖೆಗೆ ಅವರನ್ನು ಒಳಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಮೇ 30ರಂದು ದುಬೈ ಮೂಲದ ಪ್ರವಾಸಿ ಏಜೆನ್ಸಿ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಅಬ್ದುಲ್ ಸಮದ್ಗೆ ನೀಡಿದ ಟಿಕೆಟ್ನಲ್ಲಿ ಪಾಸ್ ಪೋರ್ಟ್ ಸಂಖ್ಯೆಯನ್ನು ತಪ್ಪಾಗಿ ಮುದ್ರಿಸಿರುವುದು ಇಷ್ಟೆಲ್ಲಾ ಅನುಮಾನಗಳಿಗೆ ಎಡೆಮಾಡಿಕೊಡಲು ಕಾರಣ ಎಂದು ಕ್ಷಮೆಯಾಚಿಸಿ ಭಾರತ ರಾಯಭಾರಿ ಕಚೇರಿಗೆ ಅಧಿಕೃತ ಪತ್ರ ಬರೆದಿದೆ ಎಂದು ವರದಿಯಲ್ಲಿ ಹೇಳಿದೆ.