ಪ್ರವಾದಿ ಮಹಮ್ಮದ್ ಅವರಿಗೆ ಅಪಮಾನ ಮಾಡುವವರನ್ನು ಕೊಂದು ಹಾಕಿ -- ಹೀಗೆಂದು ಕರೆ ನೀಡಿರುವುದು ಅಲ್ಖೈದಾ ಹೊರ ತರುತ್ತಿರುವ ನಿಯತಕಾಲಿಕ. ತನ್ನ ಮೊದಲ ಆವೃತ್ತಿಯಲ್ಲಿ ಜಗತ್ತಿನಾದ್ಯಂತದ ಇಸ್ಲಾಂ ಧರ್ಮೀಯರಿಗೆ ಹೀಗೆಂದು ಹಿಂಸಾತ್ಮಕ ಬೋಧನೆಯನ್ನು ಅದು ನೀಡಿದೆ.
ಪ್ರವಾದಿಯವರನ್ನು ಅಪಮಾನ ಮಾಡುತ್ತಿರುವುದು ಹೆಚ್ಚುತ್ತಿರುವುದಕ್ಕೆ ಸೂಕ್ತ ಪರಿಹಾರವೆಂದರೆ ಅಂತಹ ಕೃತ್ಯಗಳಲ್ಲಿ ತೊಡಗಿದವರನ್ನು ಮುಗಿಸಿ ಬಿಡುವುದು ಎಂದು 'ಇನ್ಸ್ಪೈರ್' ಎಂಬ ನೂತನ ವೆಬ್ ಮ್ಯಾಗಜಿನ್ನ ಲೇಖನದಲ್ಲಿ ಪ್ರಕಟಿಸಲಾಗಿದೆ ಎಂದು ಅಮೆರಿಕಾದ 'ಸೈಟ್' ಎಂಬ ವೀಕ್ಷಣಾ ಇಲಾಖೆಯು ತಿಳಿಸಿದೆ.
ಈ ಲೇಖನವನ್ನು ಬರೆದಿರುವುದು ಅಮೆರಿಕಾ ಸಂಜಾತ ಯೆಮನ್ ಮುಸ್ಲಿಂ ಧಾರ್ಮಿಕ ಮುಖಂಡ ಅನ್ವರ್ ಅಲ್-ಅಲ್ವಾಕಿ. ಪ್ರವಾದಿಯವರನ್ನು ಯಾರೇ ಅಪಮಾನಕ್ಕೊಳಪಡಿಸಿದರೂ ಅವರನ್ನು ಬದುಕಲು ಬಿಡಬಾರದು ಎಂದು ಆತ ಹೇಳಿದ್ದಾನೆ.
ಪ್ರವಾದಿಯವರ ಚಿತ್ರ ಬಿಡಿಸುವುದು ಇಸ್ಲಾಂ ಪ್ರಕಾರ ನಿಷಿದ್ಧವಾಗಿದ್ದ ಹೊರತಾಗಿಯೂ ವಿವಾದಗಳ ಕಾರಣದಿಂದ ಪ್ರತಿಯೊಬ್ಬರೂ ಮಹಮ್ಮದ್ ಅವರ ಚಿತ್ರವನ್ನು ಮೇ 20ರಂದು ಬಿಡಿಸಬೇಕು ಎಂದು ಕರೆ ನೀಡಿದ್ದ ವಾಷಿಂಗ್ಟನ್ನ ಸೀಟಲ್ನಲ್ಲಿನ ಮೋಲಿ ನೋರಿಸ್ ಕರೆಗೆ ಪ್ರತಿಕ್ರಿಯೆ ನೀಡಿರುವ ಈ ಲೇಖನದಲ್ಲಿ, ಕಾರ್ಟೂನಿಸ್ಟ್ ಮತ್ತು ಅವರ ಸಹಚರರನ್ನು ಗುರಿ ಮಾಡಬೇಕು ಎಂದು ಕರೆ ನೀಡಲಾಗಿದೆ.
ಪ್ರವಾದಿಯವರ ಕಾರ್ಟೂನ್ ಬಿಡಿಸಬೇಕೆಂದು ಕರೆ ನೀಡಿರುವ ಆಕೆಯನ್ನು ಮತ್ತು ಆಕೆಯ ಜತೆ ಪ್ರಚಾರಗಳಿಗೆ ಕೈ ಜೋಡಿಸಿರುವವರನ್ನು ಹತ್ಯೆ ಮಾಡಬೇಕು. ಇದರಲ್ಲಿ ಹಲವರು ಪಾಲ್ಗೊಂಡಿರುವುದರಿಂದ ನಮಗೆ ಗುರಿ ಮಾಡಲು ಅನೇಕ ಆಯ್ಕೆಗಳಿವೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ.