ಸುಹಾರ್ತೋ ಪುತ್ರನ ಆಸ್ತಿ ವಶಕ್ಕೆ ಇಂಡೋನೇಷ್ಯಾ ಸುಪ್ರೀಂ ಆದೇಶ
ಜಕಾರ್ತಾ, ಶನಿವಾರ, 17 ಜುಲೈ 2010( 15:35 IST )
ಇಂಡೋನೇಷ್ಯಾ ಮಾಜಿ ಅಧ್ಯಕ್ಷ ಸುಹಾರ್ತೋ ಅವರ ಪುತ್ರನ ವಿರುದ್ಧದ ನಾಗರಿಕ ವಂಚನೆ ಪ್ರಕರಣದ ಬಗ್ಗೆ ಎರಡು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಿದ ನಂತರ ಇದೀಗ, ಸುಹಾರ್ತೋ ಪುತ್ರನ ನ್ಯಾಷನಲ್ ಕಾರ್ ಕಂಪನಿಯ ಆಸ್ತಿ-ಪಾಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸರಕಾರಕ್ಕೆ ಆದೇಶ ನೀಡಿದೆ.
ಇಂಡೋನೇಷ್ಯಾದ ಹಣಕಾಸು ಸಚಿವಾಲಯ ನ್ಯಾಯಾಲಯಕ್ಕೆ ಮೇಲ್ಮನವಿ ಮಾಡಿಕೊಂಡ ನಂತರ ಅದರ ಮರುಪರಿಶೀಲನೆಯ ನಂತರ, ಸರಕಾರ ಸುಹಾರ್ತೋ ಪುತ್ರನ ಕಂಪನಿಯ ಆಸ್ತಿಯನ್ನ ವಶಕ್ಕೆ ತೆಗೆದುಕೊಳ್ಳುವಂತೆ ತೀರ್ಪು ನೀಡಿರುವುದಾಗಿ ಕೋರ್ಟ್ನ ವಕ್ತಾರ ನುರ್ಹಾಂಡಿ ತಿಳಿಸಿದ್ದಾರೆ.
ಈ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅಂತಿಮವಾದದ್ದಾಗಿದೆ. ಈ ಬಗ್ಗೆ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಸುಪ್ರೀಂ ಆದೇಶದನ್ವಯ ಸುಹಾರ್ತೋ ಕಿರಿಯ ಪುತ್ರ ಹ್ಯೂಟೊಮೋ ಟೊಮ್ಯಾ ಮಂಡಾಲಾ ಪುತ್ರಗೆ ಸೇರಿದ್ದ 1.22 ಟ್ರಿಲಿಯನ್ ರೂಪಾಯಿಗಳಷ್ಟು ಆಸ್ತಿಯನ್ನು ಸರಕಾರ ವಶಪಡಿಸಿಕೊಳ್ಳಲಿದೆ.
ಟಿಮೋರ್ ದಕ್ಷಿಣ ಆಫ್ರಿಕಾದಿಂದ ಕಾರುಗಳನ್ನು ದೇಶಕ್ಕೆ ಆಮದು ಮಾಡಿಕೊಂಡು, ಆ ವಾಹನಗಳಿಗೆ ಲೋಗೋ ಹಾಕಿ ಅದು ದೇಶೀಯ ಕಾರುಗಳೆಂದು ಹೇಳಿ ಮಾರಾಟ ಮಾಡಲಾಗಿತ್ತು. ಆದರೆ ಈ ಯೋಜನೆ 1997ರ ಏಷಿಯನ್ ಆರ್ಥಿಕ ಹೊಡೆತದಲ್ಲಿ ತತ್ತರಿಸಿಹೋಗಿತ್ತು. ತದನಂತರ ಹ್ಯೂಟೊಮೋ ವಂಚನೆಯ ಜಾಲ ಬಯಲಾಗಿತ್ತು.
ಆ ನಂತರ ಬ್ಯಾಂಕಿಂಗ್ ರಿಸ್ಟ್ರಕ್ಚರಿಂಗ್ ಏಜೆನ್ಸಿ ಮತ್ತು ವಿಸ್ಟಾ ಕಂಪನಿ ಕಾನೂನು ಬಾಹಿರವಾದದ್ದು ಎಂದು ಸರಕಾರ ಅಧಿಕೃತವಾಗಿ ಘೋಷಿಸಿತ್ತು. 2007ರಲ್ಲಿ ಆರ್ಥಿಕ ಸಚಿವಾಲಯ ಟೊಮ್ಯಾ ಮತ್ತು ಆತನ ಕಂಪನಿ ವಿರುದ್ಧ ಮೂಕದ್ದಮೆ ಹೂಡಿತ್ತು. ಪ್ರಕರಣದ ಮರು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಟೊಮ್ಯಾ ಕಂಪನಿಯ ಆಸ್ತಿಯನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿದೆ.