ಮಾವೋವಾದಿ ಸಂಸದರೊಬ್ಬರಿಗೆ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ತನಿಖೆ ನಡೆಸಲು ವಿದೇಶಾಂಗ ಸಂಬಂಧಗಳು ಮತ್ತು ಮಾನವ ಹಕ್ಕುಗಳಿಗಾಗಿನ ನೇಪಾಳದ ಸಂಸದೀಯ ಸಮಿತಿಯು ನಿರ್ಧರಿಸಿದೆ.
ತನಗೆ ಸರಕಾರವು ಅಗತ್ಯ ಭದ್ರತೆಯನ್ನು ಒದಗಿಸಬೇಕು ಎಂದು ಮಾವೋವಾದಿ ಸಂಸದ ರಾಮ್ ಕುಮಾರ್ ಶರ್ಮಾ ಅವರು ಸಂಸತ್ ಕಾರ್ಯಾಲಯಕ್ಕೆ ದೂರು ನೀಡಿದ ನಂತರ ಈ ಬೆಳವಣಿಗೆಗಳು ಕಂಡು ಬಂದಿವೆ.
ತನಗೆ ಭಾರತೀಯ ರಾಯಭಾರ ಕಚೇರಿಯ ಸುಬ್ರತಾ ದಾಸ್ ಎಂಬವರು ಬೆದರಿಕೆ ಹಾಕಿದ್ದಾರೆ. ಈ ಪ್ರಕರಣ ನೇಪಾಳದ ಸೌರ್ವಭೌಮತೆಗೆ ಮಾಡಿದ ದಾಳಿಗೆ ಸಮಾನವಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶರ್ಮಾ ಒತ್ತಾಯಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ವಿದೇಶಾಂಗ ಸಂಬಂಧಗಳು ಮತ್ತು ಮಾನವ ಹಕ್ಕುಗಳಿಗಾಗಿನ ನೇಪಾಳದ ಸಂಸದೀಯ ಸಮಿತಿಯು ಕಾರ್ಯಪ್ರವೃತ್ತವಾಗಿದ್ದು, ಪ್ರಕರಣದ ಕುರಿತು ಸಮಾಲೋಚನೆ ನಡೆಸಲು ಪ್ರಧಾನ ಮಂತ್ರಿ ಮಾಧವ್ ಕುಮಾರ್ ನೇಪಾಳ್ ಮತ್ತು ವಿದೇಶಾಂಗ ಸಚಿವೆ ಸುಜಾತಾ ಕೊಯಿರಾಲಾ ಅವರಿಗೆ ಆಹ್ವಾನ ನೀಡಿದೆ.
ಮಾವೋವಾದಿ ನಾಯಕ ಪುಷ್ಪ ಕಮಾಲ್ ದಹಾಲ್ ಪ್ರಚಂಡಾ ಅವರನ್ನು ಪ್ರಧಾನ ಮಂತ್ರಿ ಹುದ್ದೆಗಾಗಿನ ಚುನಾವಣೆಯಲ್ಲಿ ಬೆಂಬಲಿಸುತ್ತಿರುವುದಕ್ಕೆ ತನಗೆ ಭಾರತೀಯ ರಾಯಭಾರ ಕಚೇರಿಯಿಂದ ಬೆದರಿಕೆ ಹಾಕಲಾಗಿತ್ತು. ಕೇಂದ್ರೀಯ ವಿದ್ಯಾಲಯದಲ್ಲಿರುವ ನನ್ನ ಮಗಳನ್ನು ಬಿಡಿಸಲಾಗುತ್ತದೆ ಮತ್ತು ನಿಮ್ಮನ್ನು ಅಪಹರಿಸಲಾಗುತ್ತದೆ ಎಂದು ದಾಸ್ ಎಂಬಾತ ಬೆದರಿಕೆ ಹಾಕಿದ್ದ ಎಂದು 13 ತಿಂಗಳ ಹಿಂದಷ್ಟೇ ತೆರಾಯ್ ಮಾದೇಸ್ ಲೋಕತಾಂತ್ರಿಕ್ ಪಕ್ಷದಿಂದ ವಲಸೆ ಬಂದಿದ್ದ ಶರ್ಮಾ ಆರೋಪಿಸಿದ್ದಾರೆ.