ಭಾರತ ನೇಪಾಳದ ಆಂತರಿಕ ರಾಜಕೀಯ ಬೆಳವಣಿಗೆ ಕುರಿತಂತೆ ಅನಾವಶ್ಯಕವಾಗಿ ಮೂಗು ತೂರಿಸುವುದನ್ನು ಮುಂದುವರಿಸಿದೆ ಎಂದು ನೇಪಾಳ ಮಾವೋವಾದಿ ಪಕ್ಷ ಗಂಭೀರವಾಗಿ ಆರೋಪಿಸಿದ್ದು, ಮುಖ್ಯವಾಗಿ ನೂತನ ಸರಕಾರ ರಚನೆ ಪ್ರಕ್ರಿಯೆಯಲ್ಲಿ ಅಡ್ಡಗಾಲು ಹಾಕುತ್ತಿದೆ ಎಂದು ದೂರಿದೆ.
ಮಾವೋ ಪಕ್ಷದ ಕಾರ್ಯದರ್ಶಿ ಸಿ.ಪಿ.ಗಾಜುರೆಲ್ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಮಧ್ಯಸ್ಥಿಕೆಯನ್ನು ನಾವು ತಡೆಯಬೇಕಾಗಿದೆ. ನೇಪಾಳದಲ್ಲಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಪ್ರಧಾನಿ ಆಯ್ಕೆ ಮಾಡಲು ಭಾರತ ತನ್ನ ತಂತ್ರವನ್ನು ಈಗಲೂ ಮುಂದುವರಿಸಿದೆ. ಆದರೆ ಮಾವೋ ಪಕ್ಷ ಅದಕ್ಕೆ ಅವಕಾಶ ಕೊಡಲ್ಲ ಎಂದು ತಿರುಗೇಟು ನೀಡಿದ್ದಾರೆ.
ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಮಾವೋ ಪಕ್ಷದ ಸಂಸದ ರಾಮ್ ಕುಮಾರ್ ಶರ್ಮಾ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಹೊರಬಿದ್ದ ಬೆನ್ನಲ್ಲೇ ಗಾಜುರೆಲ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಮಾವೋ ಪಕ್ಷದ ಆರೋಪವನ್ನು ಭಾರತೀಯ ರಾಯಭಾರ ಕಚೇರಿ ತಳ್ಳಿಹಾಕಿದೆ.
ನೇಪಾಳದಲ್ಲಿ ನೂತನ ಪ್ರಧಾನಿ ಆಯ್ಕೆಗಾಗಿ ಈಗಾಗಲೇ ನಾಲ್ಕು ಬಾರಿ ಚುನಾವಣೆ ನಡೆದಿತ್ತು. ಆದರೆ ಚುನಾವಣೆಯಲ್ಲಿ ಮಾವೋ ಪಕ್ಷದ ಪ್ರಚಂಡ ಹಾಗೂ ಪ್ರತಿಸ್ಪರ್ಧಿ ನೇಪಾಳಿ ಕಾಂಗ್ರೆಸ್ ಮುಖಂಡ ಪೌಡ್ಯಾಲ್ ಅವರು ಬಹುಮತ ಪಡೆಯದೆ ಸೋಲನ್ನನುಭವಿಸಿದ್ದರು.