ಇಸ್ಲಾಮಾಬಾದ್, ಭಾನುವಾರ, 17 ಅಕ್ಟೋಬರ್ 2010( 13:59 IST )
ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಲಷ್ಕರ್ ಇ ತೋಯ್ಬಾದ ಝಾಕೀರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಮಂದಿಯ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು, ಪ್ರಮುಖ ಸಾಕ್ಷಿಗಳಾದ ಅಜ್ಮಲ್ ಕಸಬ್ ಮತ್ತು ಫಹೀಂ ಅನ್ಸಾರಿಯವರನ್ನು ವಿಚಾರಣೆ ನಡೆಸದ ಹೊರತು ಪ್ರಕರಣ ಮುಂದುವರಿಸುವುದು ಸಾಧ್ಯವಿಲ್ಲ ಎಂದು ಹೇಳಿದೆ.
ಅನ್ಸಾರಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿರುವುದು ಮತ್ತು ಪ್ರಮುಖ ಸಾಕ್ಷಿಗಳ ಹೇಳಿಕೆಗಾಗಿ ಆಯೋಗವೊಂದನ್ನು ಕಳುಹಿಸುವ ಸಂಬಂಧ ಭಾರತವು ಲಿಖಿತ ಅನುಮತಿ ನೀಡಿರುವ ದಾಖಲೆಗಳನ್ನು ಸರಕಾರಿ ವಕೀಲರು ನೀಡಿದರಾದರೂ, ನ್ಯಾಯಾಧೀಶ ಮಲಿಕ್ ಮೊಹಮ್ಮದ್ ಅಕ್ರಮ್ ಅವಾನ್ ಸಮಾಧಾನಗೊಳ್ಳಲಿಲ್ಲ.
ಮುಂಬೈ ದಾಳಿಯಲ್ಲಿ ಬದುಕುಳಿದಿರುವ ಏಕೈಕ ದಾಳಿಕೋರ ಅಜ್ಮಲ್ ಕಸಬ್ ಭಾರತದ ನ್ಯಾಯಾಲಯದಲ್ಲಿ ಅಪರಾಧಿಯೆಂದು ರುಜುವಾತಾಗಿ, ಮರಣ ದಂಡನೆ ಶಿಕ್ಷೆಯ ಸರದಿಯಲ್ಲಿರುವುದರಿಂದ ಆತನಿಗೆ ಜಾಮೀನು ರಹಿತ ಬಂಧನ ವಾರೆಂಟನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸರಕಾರಿ ವಕೀಲರು ತಮ್ಮ ವರದಿಯನ್ನು ರಾವಲ್ಪಿಂಡಿಯಲ್ಲಿನ ಭಾರೀ ಭದ್ರತೆಯ ಉಗ್ರ ನಿಗ್ರಹ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ ನೀಡಿದರು.
ಅದೇ ಹೊತ್ತಿಗೆ ಮುಂಬೈ ನ್ಯಾಯಾಲಯದಲ್ಲಿ ನಿರ್ದೋಷಿ ಎಂದು ತೀರ್ಪು ಪಡೆದುಕೊಂಡಿರುವ ಭಾರತದ ಶಂಕಿತ ಉಗ್ರ ಅನ್ಸಾರಿಗೆ ಬಂಧನ ವಾರೆಂಟ್ ನೀಡುವ ಕುರಿತು ಸರಕಾರಿ ವಕೀಲರು ಯಾವುದೇ ಅಂಶವನ್ನು ನಮೂದಿಸದೇ ಇರುವುದನ್ನು ನ್ಯಾಯಾಧೀಶರು ಎತ್ತಿ ತೋರಿಸಿದರು.
ಹೊರಡಿಸಿರುವ ವಾರೆಂಟ್ಗಳ ಪ್ರಕ್ರಿಯೆ ಪೂರ್ಣಗೊಳ್ಳದ ಮತ್ತು ಅನ್ಸಾರಿಯಂತಹ ಸಾಕ್ಷಿಗಳ ವಿಚಾರಣೆಗೆ ಅವಕಾಶ ನ್ಯಾಯಾಲಯಕ್ಕೆ ದೊರೆಯದ ಹೊರತು ವಿಚಾರಣೆಯು ಮುಂದಕ್ಕೆ ಸಾಗದು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿದೆ.
ಈ ಸಂಬಂಧ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸರಕಾರಿ ವಕೀಲರು ನಾಲ್ಕು ವಾರಗಳ ಕಾಲಾವಕಾಶ ಕೇಳಿದರು. ಅದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಮುಂದಿನ ವಿಚಾರಣೆಯನ್ನು ನವೆಂಬರ್ 13ರಂದು ನಡೆಸಲಾಗುವುದು ಎಂದು ತಿಳಿಸಿದ್ದಾರೆ.