ಇಂಡೋನೇಷ್ಯಾದ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ ಉಕ್ಕಿಹರಿದ ತ್ಸುನಾಮಿ ಅಲೆಗೆ ಸುಮಾರು 272 ಮಂದಿ ಬಲಿಯಾಗಿದ್ದು, ನೂರಾರು ಜನರು ಕಣ್ಮರೆಯಾಗಿದ್ದಾರೆ. ತ್ಸುನಾಮಿ ಅಲೆಯಿಂದ ದ್ವೀಪ ಪ್ರದೇಶದ ಗ್ರಾಮಗಳು ತತ್ತರಿಸಿಹೋಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ಮೆಂಟಾವೈ ದ್ವೀಪಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿತ್ತು. ನಂತರ ಕರಾವಳಿಯಲ್ಲಿ ಸುಮಾರು ಮೂರು ಮೀಟರ್ (10 ಅಡಿ) ಎತ್ತರದ ರಕ್ಕಸಗಾತ್ರದ ಅಲೆಗಳು ಎದ್ದ ಪರಿಣಾಮ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಅಧಿಕಾರಿಗಳು ವಿವರಿಸಿದ್ದಾರೆ.
ತ್ಸುನಾಮಿ ಅಬ್ಬರಕ್ಕೆ ಸುಮಾರು 272 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆಂದು ಪೂರ್ವ ಸುಮಾತ್ರಾ ಆಪತ್ತು ನಿರ್ವಹಣಾ ಮುಖ್ಯಸ್ಥ ಹಾರ್ಮೆನ್ಶಾಯ್ ತಿಳಿಸಿದ್ದಾರೆ.