ಮೊಹಾಲಿಯಲ್ಲಿ ನಡೆದ ಪಾಕ್ ಮತ್ತು ಭಾರತ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ಪಂದ್ಯವನ್ನು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮತ್ತು ಭಾರತೀಯ ಪ್ರಧಾನಿ ಮನಮೋಹನ ಸಿಂಗ್ ಅವರು ಒಟ್ಟಿಗೆ ಕುಳಿತು ವೀಕ್ಷಿಸಿದ್ದು ಶುದ್ಧ ಅವಿವೇಕ ಎಂದು ನಿಷೇಧಿತ ಭಯೋತ್ಪಾದನಾ ಸಂಘಟನೆ ಜಮ್ಮಾತ್ ಉದ್ ದಾವಾ (ಜೆಯುಡಿ) ದ ಸ್ಥಾಪಕ ಹಾಗೂ ಮುಂಬೈ ದಾಳಿಯ ಪ್ರಮುಖ ಸೂತ್ರದಾರ ಹಫೀಜ್ ಸಯೀದ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಇಸ್ಲಾಮಾಬಾದ್ನಲ್ಲಿ ನೆರೆದಿದ್ದ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸಯೀದ್, ಮನಮೋಹನ್ ಸಿಂಗ್ ಅವರ ಕಣ್ಣೊರೆಸುವ ಆಹ್ವಾನವನ್ನು ಒಪ್ಪಿಕೊಂಡ ಪಾಕ್ನ ಪ್ರಧಾನಿ ಗಿಲಾನಿಯ ವರ್ತನೆಯನ್ನು ಖಂಡಿಸಿದರು.
ಕ್ರಿಕೆಟ್ನ ಆರ್ಭಟ ಮುಂದುವರಿಯುತ್ತಿದ್ದಂತೆ ಇತ್ತ ಎರಡೂ ರಾಷ್ಟ್ರಗಳ ಪ್ರಧಾನಿಗಳು ಉಭಯ ರಾಷ್ಟ್ರಗಳ ಬಾಂದವ್ಯವನ್ನು ಗಟ್ಟಿಗೊಳಿಸುವ ಬಗ್ಗೆ ಮಾತುಕತೆಯಲ್ಲಿ ನಿರತರಾಗಿದ್ದರು. ಆದರೆ, ಇದೆಲ್ಲವನ್ನು ನಿಸ್ಸಂಶಯವಾಗಿ ತಳ್ಳಿಹಾಕಿರುವ ಸಯೀದ್, ಕ್ರಿಕೆಟ್ ರಾಜಕೀಯ ತಂತ್ರ ಎಂಬುದು ವ್ಯಾಪಾರ ಮತ್ತು ಗೆಳೆತನದ ನಡುವಿನ ಸಂಬಂಧದಂತೆ. ವ್ಯಾಪಾರವೇ ಬೇರೆ, ಗೆಳೆತನವೇ ಬೇರೆ. ನಮಗೆ ಈ ಬಗ್ಗೆ ಸ್ಪಷ್ಟ ವಿಚಾರ ಗೊತ್ತಾಗಬೇಕು. ಕಾಶ್ಮೀರಿ ಜನತೆ ಭಾರತದಿಂದ ಮುಕ್ತರಾಗುವವರೆಗೂ ಅವರ ಬೆಂಬಲಕ್ಕೆ ನಾವಿದ್ದೇವೆ. ಅವರಿಗೆ ಸ್ವಾತಂತ್ರ್ಯ ಸಿಗುವವರೆಗೂ ನಾವು ಅವರೊಂದಿಗಿರುತ್ತೇವೆ ಎಂದಿದ್ದಾರೆ.