ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ:ಅಣ್ಣಾ ಹಜಾರೆಗೆ ಬೆಂಬಲ ನೀಡಿದ ಭಾರತೀಯರಿಗೆ ಜೈಲು
(Anna Hazare,| Indian Consulate | Dubai | Al Mumzar Park | International News in Kannada)
ದುಬೈ:ಅಣ್ಣಾ ಹಜಾರೆಗೆ ಬೆಂಬಲ ನೀಡಿದ ಭಾರತೀಯರಿಗೆ ಜೈಲು
ದುಬೈ, ಶುಕ್ರವಾರ, 2 ಸೆಪ್ಟೆಂಬರ್ 2011( 16:27 IST )
ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ದುಬೈನಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಿದ್ದಕ್ಕಾಗಿ ಐವರು ಭಾರತೀಯರನ್ನು ಪೊಲೀಸರು ಬಂಧಿಸಿದ್ದಾರೆ. 12 ದಿನಗಳಿಂದ ಜೈಲಿನಲ್ಲಿರುವವರ ಬಿಡುಗಡೆಗೆ ಭಾರತೀಯ ರಾಯಭಾರ ಕಚೇರಿ ಕ್ರಮ ಕೈಗೊಳ್ಳಲಿದೆ ಎಂದು ವರದಿಯೊಂದು ತಿಳಿಸಿದೆ.
ಬಂಧಿತರೆಲ್ಲರೂ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 20ರಿಂದ 30ವರ್ಷದೊಳಗಿನವರಾಗಿದ್ದು, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್ ನವರಾಗಿದ್ದಾರೆ. ಕಳೆದ ಆಗಸ್ಟ್ 20 ರಂದು ದುಬೈನ ಅಲ್ ಮುಜುಂದಾರ್ ಪಾರ್ಕ್ನಿಂದ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ಗಳನ್ನು ಬಳಸಿಕೊಳ್ಳಲಾಗಿತ್ತು.
ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮೂಲಕ ದೇಶದ ಒಳಿತಿಗಾಗಿ ಹೋರಾಡುತ್ತಿರುವ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಲು ರಾತ್ರಿ 8.30ಕ್ಕೆ ಆರಂಭವಾಗುವ ಪ್ರತಿಭಟನಾ ರ್ಯಾಲಿಯು ದಕ್ಷಿಣದ ಬೀಚ್ ಮಾರ್ಗವಾಗಿ 1.5 ಕಿಲೋ ಮೀಟರ್ ಸಾಗಲಿದೆ. ಈ ಸಂದರ್ಭದಲ್ಲಿ ಶಾಂತಿ ಕಾಪಾಡಿ ಎಂದು ಸೋಷಿಯಲ್ ನೆಟ್ವರ್ಕಿಂಗ್ ಮೂಲಕ ಸಂದೇಶ ಕಳುಹಿಸಲಾಗಿತ್ತು.
ರ್ಯಾಲಿಯನ್ನು ಆಯೋಜಿಸಲು ಪೂರ್ವಾನುಮತಿ ಪಡೆಯದೇ ಇದ್ದುದರಿಂದ ಆಯೋಜಕರನ್ನು ಬಂಧಿಸಲಾಗಿದೆ ಎಂದು ದುಬೈನಲ್ಲಿರುವ ಭಾರತೀಯ ಪ್ರಧಾನ ರಾಯಭಾರಿ ಸಂಜಯ್ ವರ್ಮಾ ತಿಳಿಸಿದ್ದಾರೆ. 'ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ದುಬೈ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ದುಬೈನಲ್ಲಿ ರಂಜಾನ್ ರಜಾದಿನವೇ ಕಾರಣ, ಭಾನುವಾರ ಬಂಧಿತರೆಲ್ಲರಿಗೂ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಾಧ್ಯತೆಯಿದೆ' ಎಂದು ತಿಳಿಸಿದ್ದಾರೆ.
ಈ ಕುರಿತು ಸ್ಥಳೀಯ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಜಯ್ ವರ್ಮಾ,'ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕುರಿತು ತಮ್ಮ ಭಾವನೆಯನ್ನು ಹೊರ ಹಾಕಿದ್ದಾರೆ. ಈ ಕುರಿತು ಸಲ್ಲಿಸಿರುವ ಜಂಟಿ ಅರ್ಜಿಯಲ್ಲಿ ಈ ಕುರಿತ ಕಳವಳದ ಬಗ್ಗೆ ವಿವರಿಸಲಾಗಿದೆ. ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇರುವುದೇ ಒಳಿತು. ಸ್ಥಳೀಯ ಕಾನೂನನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ.