ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ತನಗೆ ಇಷ್ಟವಿರಲಿಲ್ಲ ಎಂಬುದಾಗಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ. ಆಗಸ್ಟ್ 19ರಂದು ಶಿಮ್ಲಾದಲ್ಲಿ ನಡೆದ ಪಕ್ಷದ ಸಂಸದೀಯ ಮಂಡಲಿಯ ಸಭೆಯಲ್ಲಿ ಸಿಂಗ್ ಉಚ್ಚಾಟನೆಯ ಬಗ್ಗೆ ತೆಗೆದುಕೊಂಡ ನಿರ್ಣಯದಲ್ಲಿ ತಾವು ಭಾಗಿಯಲ್ಲ ಎಂದು ಹೇಳುವ ಮೂಲಕ ಜಸ್ವಂತ್ ಸಿಂಗ್ ಉಚ್ಚಾಟನೆಗೆ ಹೊಸತಿರುವು ಲಭಿಸಿದೆ.
ಜಸ್ವಂತ್ ಸಿಂಗ್ ಉಚ್ಚಾಟನೆಯ ವೇಳೆಗೆ ಆಡ್ವಾಣಿ ಅವರ ಒಪ್ಪಿಗೆ ಇತ್ತು ಎಂಬುದಾಗಿ ಬಿಜೆಪಿ ನೀಡಿದ್ದ ಹೇಳಿಕೆಗೆ ಆಡ್ವಾಣಿಯವರ ಈ ಹೇಳಿಕೆ ವಿರುದ್ಧವಾಗಿದೆ. ‘ನನಗೆ ಈ ವಿಚಾರದಲ್ಲಿ ವಿವಾದ ಹುಟ್ಟುಹಾಕುವುದು ಬೇಕಿಲ್ಲ’ ಎಂದಿರುವ ಆಡ್ವಾಣಿ ಈ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.
ಸಿಂಗ್ ಉಚ್ಚಾಟನೆಯ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, "ಜಸ್ವಂತ್ ಉಚ್ಚಾಟನೆ ನೋವಿನ ಸಂಗತಿ, ಆದರೆ ಅನಿವಾರ್ಯ" ಎಂಬುದಾಗಿ ಅಡ್ವಾಣಿ ಹೇಳಿದ್ದಾರೆಂದಿದ್ದರು. ‘ಕಳೆದ 30 ವರ್ಷಗಳಿಂದ ನಮ್ಮ ಜತೆಗೆ ಇದ್ದವರನ್ನು ಪಕ್ಷದಿಂದ ಉಚ್ಚಾಟಿಸುವುದು ಮಾನಸಿಕವಾಗಿ ತುಂಬಾ ನೋವಿನ ವಿಚಾರ, ಆದರೆ ಅವರು ಪಕ್ಷದ ಮೂಲ ಸಿದ್ಧಾಂತಕ್ಕೆ ವಿರುದ್ಧವಾಗಿ ಪುಸ್ತಕ ಬರೆದಿರುವುದರಿಂದ ಉಚ್ಚಾಟನೆ ಅನಿವಾರ್ಯ’ ಎಂದು ಅಡ್ವಾಣಿ ಹೇಳಿದರೆಂದು ಸುಷ್ಮಾ ತಿಳಿಸಿದ್ದರು.