ಟ್ವಿಟರ್ ಹೇಳಿಕೆಯಿಂದ ಉದ್ಬವಿಸಿರುವ ಎಲ್ಲಾ ವಿವಾದಗಳನ್ನು ಅಂತ್ಯಗೊಳಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ಅವರಿಗೆ ತಿಳಿಸಿದ್ದಾರೆ.
ಜಾನುವಾರು ದರ್ಜೆಯ ವಿಮಾನ ಪ್ರಯಾಣದ ತನ್ನ ಹೇಳಿಕೆಯಿಂದ ಹುಟ್ಟಿಕೊಂಡಿರುವ ವಿವಾದದ ಕುರಿತು ವಿವರಣೆ ನೀಡುವ ಸಲುವಾಗಿ ತರೂರ್ ಅವರು ಮಂಗಳವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ವಿವಾದ ಹುಟ್ಟಿಕೊಳ್ಳುವಂತಹ ಹೇಳಿಕೆಗಳನ್ನು ನೀಡದಿರುವಂತೆ ತರೂರ್ಗೆ ಸೋನಿಯಾ ಗಾಂಧಿ ಕಿವಿ ಮಾತು ಹೇಳಿದ್ದಾರೆ.
ರಾಷ್ಟ್ರದಲ್ಲಿನ ಬರಸ್ಥಿತಿಯ ಹಿನ್ನೆಲೆಯಲ್ಲಿ ಮಿತವ್ಯಯದ ಚಳುವಳಿ ಹಮ್ಮಿಕೊಂಡಿರುವ ಕಾಂಗ್ರೆಸ್, ತನ್ನ ಸಚಿವರು ಹಾಗೂ ಸಂಸದರು ಇಕಾನಮಿ ದರ್ಜೆಯಲ್ಲಿ ಪ್ರಯಾಣಿಸಬೇಕು ಎಂಬುದಾಗಿ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ಪತ್ರಕರ್ತರೊಬ್ಬರು ಕೇಳಿದ್ದ ಪ್ರಶ್ನೆಗೆ ತರೂರ್ ಉತ್ತರಿಸಿದ್ದ ರೀತಿ ಅವಮಾನಕಾರಿ ಎಂಬಂತೆ ಧ್ವನಿಸಿತ್ತು.
PTI
ಸಚಿವರೇ ನೀವು ಜಾನುವಾರು ದರ್ಜೆಯಲ್ಲಿ ಪ್ರಯಾಣಿಸುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ತರೂರ್, ನಮ್ಮೆಲ್ಲ ಪೂಜನೀಯ ದನಗಳೊಂದಿಗೆ ಒಮ್ಮತ ಸೂಚಿಸುವ ನಿಟ್ಟಿನಲ್ಲಿ ನಾನೂ ಜಾನುವಾರು ದರ್ಜೆಯಲ್ಲಿ ಪ್ರಯಾಣಿಸುವೆ ಎಂಬರ್ಥದ ಉತ್ತರ ನೀಡಿದ್ದರು. ಇದರಿಂದಾಗಿ ತರೂರ್ ಸಮಸ್ಯೆಯಲ್ಲಿ ಸಿಲುಕಿದ್ದು, ಅವರ ಈ ಹಾಸ್ಯವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿತ್ತು. ಅಲ್ಲದೆ ತರೂರ್ ರಾಜೀನಾಮೆ ನೀಡಬೇಕು ಎಂಬುದಾಗಿ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು.