ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ರಾಜೇಂದ್ರ ಶೆಖಾವತ್ಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಸಲುವಾಗಿ ಕಾಂಗ್ರೆಸ್ ರಾಜಕಾರಣಿಗಳ ಅನನುಭವಿ ಮಕ್ಕಳಿಗೆ ಟಿಕೆಟ್ ನೀಡಬಾರದೆಂಬ ತನ್ನ ನಿಲುವನ್ನು ಬದಲಿಸಿದೆ. ಕಾಂಗ್ರೆಸ್ ಟಿಕೆಟ್ಗಾಗಿ ಹಿರಿಯ ರಾಜಕಾರಣಿಗಳ ಮಕ್ಕಳು, ಬಂಧುಗಳ ದಂಡೇ ತುದಿಗಾಲಲ್ಲಿ ನಿಂತಿದೆ.
ಶೆಖಾವತ್ ಅವರು ಕಾಂಗ್ರೆಸ್ ಭದ್ರಕೋಟೆ ಅಮರಾವತಿ ಮೇಲೆ ತನ್ನ ಕಣ್ಣಿರಿಸಿದ್ದಾರೆ. ಇದೊಂದು ಪ್ರಜಾಪ್ರಭುತ್ವ ಸರ್ಕಾರವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಕ್ಕಿದೆಯೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಶೆಖಾವತ್ ಪರವಾಗಿ ಹೇಳಿದ್ದಾರೆ.ಇದಕ್ಕೆ ಮುಂಚೆ ಕಾಂಗ್ರೆಸ್ ಪಕ್ಷವು ಪ್ರಭಾವಿ ನಾಯಕರ ಅನನುಭವಿ ಬಂಧುಗಳಿಗೆ ಟಿಕೆಟ್ ನೀಡುವುದರ ಪರವಾಗಿ ಇರಲಿಲ್ಲ.
ವಂಶಪಾರಂಪರ್ಯ ಆಡಳಿತದ ಟೀಕೆಗಳಿಗೆ ಹೆದರಿ ಟಿಕೆಟ್ ನೀಡುವುದಕ್ಕೆ ವಿರೋಧಿಸಿತ್ತು. ಆದರೆ ರಾಷ್ಟ್ರಪತಿ ಪುತ್ರ ಕಣಕ್ಕೆ ಧುಮುಕಿದ ಕೂಡಲೇ ಪರಿಸ್ಥಿತಿ ಬದಲಾಯಿತು. ಮಹಾರಾಷ್ಟ್ರದ ವಿವಿಧ ಅಧಿಕಾರ ವಲಯದಲ್ಲಿ ಸಮತೋಲನ ಸಾಧನೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್ ಪುತ್ರರಾದ ಅಮಿತ್ಗೆ ಕೂಡ ಟಿಕೆಟ್ ನೀಡಲು ವರಿಷ್ಠ ಮಂಡಳಿ ನಿರ್ಧರಿಸಿದೆ. ಪಾಟೀಲ್ ಪುತ್ರ ಶೆಖಾವತ್ ಅವರ ಜತೆಗೆ, ಪ್ರಮುಖ ನಾಯಕರ ಬಂಧುಗಳಾದ ಕನಿಷ್ಠ 12 ಮುಖಗಳು ಕಾಂಗ್ರೆಸ್ ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ.
ಅಮಿತ್ ಅವರು ಲಾಟುರ್ ಟಿಕೆಟ್ ಮೇಲೆ ಕಣ್ಣಿರಿಸಿದ್ದರೆ, ಕೇಂದ್ರ ವಿದ್ಯುತ್ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಪ್ರನೀತಿ ಸೋಲಾಪುರ ಸೆಂಟ್ರಲ್ನಿಂದ ಸ್ಪರ್ಧಿಸಲು ಆಸಕ್ತಿತರಾಗಿದ್ದಾರೆ. ಶಿಂಧೆಯ ಅಳಿಯ ರಾಜ್ ಶ್ರಾಫ್ ಕೂಡ ಸ್ಪರ್ಧೆಯಲ್ಲಿದ್ದು, ಮುಂಬೈ ಕ್ಷೇತ್ರದಿಂದ ಟಿಕೆಟ್ ಪಡೆಯಲು ನಿರ್ಧರಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ಸೊಸೆ ಕೂಡ ಚುನಾವಣೆ ಕಣಕ್ಕಿಳಿಯಲು ಆಸಕ್ತಿ ತಾಳಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕಾಣಿಗಳ ಅನನುಭವಿ ಬಂಧುಗಳಿಗೆ ಟಿಕೆಟ್ ನೀಡುವ ನಿರ್ಧಾರದಿಂದ ಹರ್ಯಾಣದಲ್ಲಿ ಕೂಡ ಇದೇ ರೀತಿ ವಿನಾಯಿತಿ ತೋರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಹರ್ಯಾಣದಲ್ಲಿ ಕೂಡ ಪಕ್ಷದ ನಾಯಕರ ಬಂಧುಗಳಾದ ಹೊಸ ಮುಖಗಳಿಗೆ ಟಿಕೆಟ್ ನೀಡಬಾರದೆಂದು ನಿರ್ಧರಿಸಿತ್ತು.