ಮಂಗಳವಾರದಂದು ಪಾಟ್ನಾದಲ್ಲಿ ಬಂಧಿತನಾದ ಶಂಕಿತ ಐಎಸ್ಐ ಏಜೆಂಟ್ ಸುಧಾಂಶು ಸುಧಾಕರ್, ಸಿಕಂದ್ರಾಬಾದ್ನಲ್ಲಿರುವ ಇಎಂಇ ಕೇಂದ್ರ ಕಚೇರಿ ಮತ್ತು ಜಮ್ಮು ಕಾಶ್ಮಿರದಲ್ಲಿರುವ ನಿವೃತ್ತ ಸೇನಾಧಿಕಾರಿಗಳು ಪ್ರಮುಖ ಮಾಹಿತಿಯ ಮೂಲಗಳಾಗಿವೆ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸುಧಾಕರ್ ನೀಡಿದ ಹೇಳಿಕೆಗಳನ್ನು ಆಧರಿಸಿ, ಸೇನಾ ಕೇಂದ್ರ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತಿದ್ದು, ಈ ಸಂದರ್ಭದಲ್ಲಿ ಹೆಸರುಗಳನ್ನು ಬಹಿರಂಗಪಡಿಸಲಾಗದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳಿ ಮೂಲದ ರಾಣಾ ಅವರೊಂದಿಗೆ ತಮಗೆ ಸಂಪರ್ಕವಿರುವುದನ್ನು ಖಚಿತಪಡಿಸಿದ ಸುಧಾಕರ್, ಸೇನಾ ಮಾಹಿತಿ ನೀಡಿ 50 ಸಾವಿರ ರೂಪಾಯಿಗಳನ್ನು ಪಡೆದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪಟ್ನಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ವಿನಾಯಕ್ ಹೇಳಿದ್ದಾರೆ.
ಶಂಕಿತ ಐಎಸ್ಐ ಏಜೆಂಟ್ ಸುಧಾಕರ್ ಪ್ರಸಕ್ತ ವರ್ಷದ ಆರಂಭದಲ್ಲಿ ಭುಜ್ ನಗರಕ್ಕೆ ಭೇಟಿ ನೀಡಿ, ಸೇನೆಗೆ ಸಂಬಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡಿರುವುದು ಖಚಿತವಾಗಿದೆ ಎಂದು ಬಿಹಾರ್ ಪೊಲೀಸ್ ಮೂಲಗಳು ತಿಳಿಸಿವೆ.