ಗುರ್ಗಾಂವ್, ಶನಿವಾರ, 26 ಸೆಪ್ಟೆಂಬರ್ 2009( 16:26 IST )
ಪಾಲಮ್ ವಿಹಾರ ಪ್ರದೇಶದಲ್ಲಿ ಕುಟುಂಬ ಒಂದರ ಎಂಟು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಗುಂಡಿಕ್ಕಿ ಸಾಯಿಸಿದ್ದಾರೆ. ಇವರೊಂದಿಗಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ ಎಂದು ಉನ್ನತ ಪೊಲೀಸಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ವರು ಕ್ರಿಮಿನಲ್ಗಳು ಇಬ್ಬರು ಮಕ್ಕಳು ಸೇರಿದಂತೆ ಕುಟುಂಬ ಒಂದರ ಎಂಟು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಒತ್ತೆಯಾಳುಗಳಲ್ಲಿ ಒಬ್ಬಾತ ಅದು ಹೇಗೋ ಪೊಲೀಸರಿಗೆ ವಿಚಾರ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಕುಟುಂಬವನ್ನು ಬಿಡುಗಡೆ ಮಾಡುವಂತೆ ತಿಳಿಸಿದಾಗ, ದುಷ್ಕರ್ಮಿಗಳು ಗುಂಡು ಹಾರಾಟ ನಡೆಸಿದ್ದು, ಪ್ರತಿಯಾಗಿ ಪೊಲೀಸರೂ ಗುಂಡು ಹಾರಾಟ ನಡೆಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬುದಾಗಿ ಗುರ್ಗಾಂವ್ ಪೊಲೀಸ್ ಆಯುಕ್ತ ಸುರ್ಜಿತ್ ಸಿಂಗ್ ದೇಸ್ವಾಲ್ ತಿಳಿಸಿದ್ದಾರೆ.
ಎರಡು ನಾಡ ಪಿಸ್ತೂಲು, ಒಂದು ಚಾಕು ಹಾಗೂ ಒಂದು ಮೊಬೈಲ್ ಫೋನನ್ನು ಮೃತರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಒತ್ತೆಯಾಳುಗಳೆಲ್ಲರನ್ನೂ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೆಲಸಕ್ಕೆ ತೆರಳಿದ್ದ ಪುತ್ರ ಮನೆಗೆ ರಾತ್ರಿ ವಾಪಾಸಾದ ವೇಳೆ ಬಾಗಿಲು ತೆರೆದಾಗ ಈ ನಾಲ್ವರು ಮನೆಯೊಳಗೆ ನುಸುಳಿದರು ಎಂಬುದಾಗಿ ಮನೆಯೊಡೆಯ ಅನೂಪ್ ಚತುರ್ವೇದಿ ತಿಳಿಸಿದ್ದಾರೆ. ಇವರು ಕಳ್ಳತನದ ಉದ್ದೇಶದಿಂದ ಮನೆಯೊಳಕ್ಕೆ ನುಸುಳಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.