ಮುಸ್ಲಿಮರ ಓಲೈಕೆಗಾಗಿ, ಸಂಸತ್ ಭವನದ ಮೇಲೆ ದಾಳಿ ನಡೆಸಿರುವ ಆರೋಪಿ ಆಫ್ಜರ್ ಗುರುವನ್ನು ಗಲ್ಲಿಗೇರಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮೀನ-ಮೇಷ ಎಣಿಸುತ್ತಾ ಚೆಲ್ಲಾಟವಾಡುತ್ತಿದೆ ಎಂಬುದಾಗಿ ಆರ್ಎಸ್ಎಸ್ ದೂರಿದೆ.
"ಸುಪ್ರೀಂಕೋರ್ಟ್ ಆಫ್ಜಲ್ಗೆ ಗಲ್ಲು ಶಿಕ್ಷೆ ವಿಧಿಸಿ ಮೂರು ವರ್ಷಗಳೇ ಕಳೆದಿದ್ದರೂ ಇದನ್ನು ಜಾರಿಗೆ ತರಲು ಯುಪಿಎ ಸರ್ಕಾರ ಹಿಂಜರಿಯುತ್ತಿದೆ. ಈ ಕುರಿತು ಯುಪಿಎ ನೀಡುತ್ತಿರುವ ಹಲವಾರು ಹೇಳಿಕೆಗಳು, ಅಫ್ಜಲ್ನನ್ನು ಗಲ್ಲಿಗೇರಿಸುವುದರಿಂದ ಸಮಾಜದ ಒಂದುವರ್ಗದ ಭಾವನೆಗಳಿಗೆ ನೋವುಂಟಾಗುತ್ತದೆ ಎಂಬ ಸಂದೇಶ ನೀಡುತ್ತಿದೆ. ಅಫ್ಜಲ್ ಗುರುವಿನ ದಯಾಭಿಕ್ಷೆ ಅರ್ಜಿಯ ಮೇಲೆ ಯುಪಿಎ ಸರ್ಕಾರ ಕುಳಿತಿದೆ" ಎಂಬುದಾಗಿ ಆರ್ಎಸ್ಎಸ್ ತನ್ನ ಮುಖವಾಣಿ ಆರ್ಗನೈಸರ್ನಲ್ಲಿ ಬರೆದಿದೆ.
ಗಲ್ಲು ಶಿಕ್ಷೆಗಳ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲು ಸುಪ್ರೀಂಕೋರ್ಟ್ ಕಳೆದ ವಾರ ಹೇಳಿದೆ ಎಂಬುದಾಗಿ ವಾರಪತ್ರಿಕೆ ಆರ್ಗನೈಸರ್ ಹೇಳಿದೆ. "ಮಾನವಜೀವಗಳು ವಸ್ತುಗಳಲ್ಲ ಮತ್ತು ರಾಜಕೀಯ ಅಥವಾ ಸರ್ಕಾರಿ ನೀತಿಗಾಗಿ ಅವರನ್ನು ದಾಳಗಳಂತೆ ಬಳಸಬಾರದು" ಎಂಬುದಾಗಿ ಅದು ಸುಪ್ರೀಂಕೋರ್ಟ್ ನ್ಯಾಯಪೀಠವನ್ನು ಉಲ್ಲೇಖಿಸಿ ಹೇಳಿದೆ.
"ಅಪರಾಧ ಹಾಗೂ ಶಿಕ್ಷೆಗೂ ಕೋಮು ಬಣ್ಣವನ್ನು ನೀಡುವ ಮಟ್ಟಕ್ಕೆ ಯುಪಿಎ ಸರ್ಕಾರ ಇಳಿದಿದೆ. ಅಫ್ಜಲ್ನನ್ನು ಭಾರತದ ಒಂದು ವರ್ಗದ ಸಮುದಾಯಕ್ಕೆ ಸಂಪರ್ಕಿಸುವುದು ಭ್ರಷ್ಟ ಮನಸ್ಸಿನ ತಪ್ಪು ದೃಷ್ಟಿಕೋನವಲ್ಲದೆ ಮತ್ತೇನಲ್ಲ" ಎಂಬುದಾಗಿ ಪತ್ರಿಕೆಯ ಸಂಪಾದಕೀಯ ಹೇಳಿದೆ.